ಕೆ.ಆರ್.ಪುರ: ವಿಶ್ವ ಕಿಡ್ನಿ ದಿನಾಚರಣೆ ಪ್ರಯುಕ್ತ ಕೆ.ಆರ್.ಪುರದ ಶ್ರೀಲಕ್ಷ್ಮೀ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಕೇರಳ ಸಮಾಜಂ ಟ್ರಸ್ಟ್ ವತಿಯಿಂದ ಕಿಡ್ನಿ ಸ್ವಾಸ್ಥ್ಯ ಜಾಗೃತಿಗಾಗಿ ಮ್ಯಾರಾಥಾನ್ ಓಟ ನಡೆಯಿತು.
‘ಎಲ್ಲರಿಗೂ, ಎಲ್ಲೆಡೆಯೂ ಕಿಡ್ನಿಯ ಸ್ವಾಸ್ಥ್ಯ ಎಂಬ ಸಂದೇಶದೊಂದಿಗೆ ಮಾಜಿ ಶಾಸಕ ಐವಾನ್ ನಿಗ್ಲಿ ಮ್ಯಾರಾಥಾನ್ಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕಿಡ್ನಿ ಸ್ವಾಸ್ಥ್ಯ ಕಾಪಾಡಲು ಇಂತಹ ಕಾರ್ಯಕ್ರಮದ ಅವಶ್ಯವಿದೆ. ಆರೋಗ್ಯವಂತವಾಗಿರಲು ಜಾಗೃತಿ ಮೂಡಿಸುವುದೇ ಈ ದಿನಾಚರಣೆಯ ಉದ್ದೇಶ’ ಎಂದರು.
ಆಸ್ಪತ್ರೆಯ ಸಂಸ್ಥಾಪಕ ಅಧ್ಯಕ್ಷ ಡಾ.ಸಾಂಬಶಿವ, ‘ಕಿಡ್ನಿ ಸಮಸ್ಯೆ ಹೊಂದಿರುವ ರೋಗಿಗಳಿಗೆ ಕೇರಳ ಸಮಾಜಂ ಮತ್ತು ತನ್ನಲ್ ಗ್ರೂಪ್ ಹಾಗೂ ಶ್ರೀಲಕ್ಮೀ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ 50 ಜನರಿಗೆ ಡಯಾಲಿಸಿಸ್ ಮಾಡಲಾಗುತ್ತದೆ’ ಎಂದರು.
ಆಸ್ಪತ್ರೆಯ ಆವರಣದಿಂದ ಹಳೆ ಮದ್ರಾಸ್ ರಸ್ತೆ, ಬಸವನಪುರ ಕೆ.ಆರ್.ಪುರ ತರಕಾರಿ ಮಾರುಕಟ್ಟೆ ರಸ್ತೆವರೆಗೆ ಓಟ ನಡೆಯಿತು. ಕರ್ನಾಟಕ ಆಡಳಿತ ಸೇವೆ ಸಕಾಲ ಮಿಷನ್ ಆಡಳಿತಾಧಿಕಾರಿ ಕೆ.ಮಥಾಯಿ ಇದ್ದರು.