ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಗಳು ಅಮೃತದ ಬಿಂದುಗಳು: ಸಾಹಿತಿ ಹಂ.ಪ.ನಾಗರಾಜಯ್ಯ

ತರಳಬಾಳು ಧಾರ್ಮಿಕ, ಸಾಂಸ್ಕೃತಿಕ ಕೇಂದ್ರದಿಂದ ‘ಬಸವ ಜಯಂತಿ’
Last Updated 4 ಮೇ 2022, 10:13 IST
ಅಕ್ಷರ ಗಾತ್ರ

ಬೆಂಗಳೂರು: ‘ವಚನಗಳು ಅಮೃತದ ಬಿಂದುಗಳಿದ್ದಂತೆ. ಜಗತ್ತಿನ ಎಲ್ಲ ಭಾಗದ ಜನರೂ ಅವುಗಳ ಮಹತ್ವ ಮನಗಾಣಬಲ್ಲರು’ ಎಂದು ಸಾಹಿತಿಹಂ.ಪ.ನಾಗರಾಜಯ್ಯ ತಿಳಿಸಿದರು.

ತರಳಬಾಳು ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರ ಮಂಗಳವಾರ ಹಮ್ಮಿಕೊಂಡಿದ್ದ ‘ಬಸವ ಜಯಂತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‌

ಕಾರ್ಯಕ್ರಮದಲ್ಲಿ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಯವರ ಜೀವನ ಚರಿತ್ರೆ ಆಧರಿಸಿ ರಚನೆಯಾಗಿರುವ ‘ಧೀರ ಸನ್ಯಾಸಿ’, ಬಾಡಾಲ ರಾಮಯ್ಯನವರು ತೆಲುಗಿಗೆ ಅನುವಾದಿಸಿರುವ ‘ಬಸವೇಶ್ವರ ವಚನಾಲು’,‌ಬಣಕಾರ ಕೆ.ಗೌಡಪ್ಪ ಅವರು ಹಿಂದಿಗೆ ಅನುವಾದಿಸಿರುವ ‘ಬಸವಣ್ಣನವರ ಷಟ್‌ಸ್ಥಲ ವಚನಗಳು’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ‘ಶಿವಶರಣರ ವಚನ ಸಂಪುಟ’ ಅಂತರ್ಜಾಲ ತಾಣವನ್ನೂ ಅನಾವರಣಗೊಳಿಸಲಾಯಿತು.

‘ಬಸವಣ್ಣನವರು ಜನಭಾಷೆಗೆ ಸ್ಪಂದಿಸಿದ ಮಹಾನುಭಾವ.ನಮ್ಮ ತಿಳಿವಳಿಕೆಗೇ ಹೊಸ ತಿರುವು ನೀಡಿದವರು. ಕನ್ನಡ ಕಾಪಾಡುವ ದೃಷ್ಟಿಯಿಂದ ಆಡುಭಾಷೆಯಲ್ಲೇ ತಮ್ಮ ತಿಳಿವಳಿಕೆ ಹೇಳಿದವರು.ಸಮಾಜದಲ್ಲಿ ಅದ್ಭುತ ಕ್ರಾಂತಿ ಮಾಡಿ, ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಒಟ್ಟು ಕರ್ನಾಟಕವು ಜಗತ್ತಿನ ಭೂಪಟದಲ್ಲಿ ನಿಲ್ಲುವಂತೆ ಮಾಡಿದವರು ಬಸವಣ್ಣ ಹಾಗೂ ಅವರ ಸಮಕಾಲೀನರು’ ಎಂದು ಹಂಪನಾ ಹೇಳಿದರು.

‘ಹಿಂದಿ ಹೇರಿಕೆಯಂತಹ ದಬ್ಬಾಳಿಕೆಯನ್ನು ತಡೆಯಲು, ಮಾತೃಭಾಷೆ ಕೊಚ್ಚಿ ಹೋಗದ ಹಾಗೆ ಕಾಪಾಡಲು ಬಸವಣ್ಣ ಹಾಗೂ ಇತರ ಶರಣರ ವಚನಗಳು ಸಹಾಯಕವಾಗಿವೆ’ ಎಂದರು.

‘ಧೀರ ಸನ್ಯಾಸಿ’ ಕೃತಿ ಸಂಪಾದಿಸಿರುವ ಪ್ರೊ. ಚಂದ್ರಶೇಖರಯ್ಯ, ‘ಈ ಕೃತಿ 500 ಪುಟಗಳನ್ನು ಒಳಗೊಂಡಿದೆ. ಶಿವಕುಮಾರ ಶಿವಾಚಾರ್ಯರ ಬದುಕು ಒಂದು ಪ್ರವಾಹವಿದ್ದಂತೆ. ಅದು ಅವರ ಶತ್ರುಗಳು ಹಾಗೂ ಮಿತ್ರರ ನಡುವೆ ಹರಿದಿತ್ತು. ಮರುಳಸಿದ್ಧ ಮತ್ತು ಬಸವಣ್ಣನವರ ಹೃದಯ ಹಾಗೂ ಬೌದ್ಧಿಕ ಸಂಪನ್ನತೆಯು ಶಿವಕುಮಾರ ಸ್ವಾಮಿಯವರಲ್ಲಿ ಮೇಳೈಸಿತ್ತು’ ಎಂದು ಹೇಳಿದರು.

ಸುಪ್ರೀಂ ಕೋರ್ಟ್‌ನಿವೃತ್ತ ನ್ಯಾಯಮೂರ್ತಿ ಶಿವರಾಜ್‌ ವಿ.ಪಾಟೀಲ, ‘ಧೀರ ಸನ್ಯಾಸಿ’ ಕೃತಿಯು ಕೈ ತೊಳೆದು ಓದುವಂತಹದ್ದು. ಶಿವಕುಮಾರ ಶಿವಾಚಾರ್ಯರ ಜೀವನ ಅರಿತುಕೊಳ್ಳಲು ಇದು ಸಹಕಾರಿ. ಈಗಿನ ರೋಗಗ್ರಸ್ತ ಜಗತ್ತಿಗೆ ಶರಣರ ವಚನಗಳು ಸಂಜೀವಿನಿ ಇದ್ದಂತೆ’ ಎಂದು ತಿಳಿಸಿದರು.

‘ಶಿವಮೂರ್ತಿ ಸ್ವಾಮೀಜಿ ಹಲವು ಜ್ಞಾನಗಳ ಸಂಗಮವಿದ್ದಂತೆ’
‘ಶಿವಮೂರ್ತಿ ಶಿವಾಚಾರ್ಯರಿಗೆ ಅಕ್ಷರ, ಅವುಗಳ ಅರ್ಥ ಹಾಗೂ ಭಾವನೆಯ ಜ್ಞಾನ ಇದೆ. ಸರಿಯಾದ ಅರ್ಥ ಹಾಗೂ ಭಾವನೆಗಳನ್ನು ವ್ಯಕ್ತಪಡಿಸುವುದು ಅವರ ಲೇಖನದ ವಿಶೇಷತೆ. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಆಗುತ್ತಿರುವ ಹೊಸ ಆವಿಷ್ಕಾರಗಳ ಬಗೆಗೂ ‌ಅರಿತುಕೊಂಡಿರುವ ಅವರು ಎಲ್ಲಾ ಜ್ಞಾನಗಳ ಸಂಗಮವಿದ್ದಂತೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘12ನೇ ಶತಮಾನದಲ್ಲಿ ವಚನಗಳ ಮೂಲಕ ವೈಚಾರಿಕ ಕ್ರಾಂತಿ ಮಾಡಿದ ಮಹಾನ್‌ ಚೇತನ ಬಸವಣ್ಣ. ಆ ಕಾಲದಲ್ಲೇ ಅವರು ಕನ್ನಡವನ್ನು ಶ್ರೀಮಂತಗೊಳಿಸಿದ್ದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT