ಯಲಹಂಕ: ‘ಜಾಲಾ ಹೋಬಳಿಯ ನಾಲ್ಕು ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆಯಲ್ಲಿ ಮೂರರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಬಹುಮತ ಪಡೆದಿದ್ದಾರೆ. ಇದಕ್ಕೆ ಸಹಕಾರ ನೀಡಿದ ಜನತೆಗೆ ಕೃತಜ್ಞತೆ ಅರ್ಪಿಸುವುದರ ಜೊತೆಗೆ ಅವರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯ ಗಳನ್ನು ಕೈಗೊಂಡು, ವಿಶ್ವಾಸ ಉಳಿಸಿಕೊಳ್ಳಲಾಗುವುದು’ ಎಂದು ಶಾಸಕ ಕೃಷ್ಣಬೈರೇಗೌಡ ತಿಳಿಸಿದರು.
ಕೊಡಿಗೇಹಳ್ಳಿ ವಾರ್ಡ್ ವ್ಯಾಪ್ತಿಯ ಹೊಸಹಟ್ಟಿ ಬಡಾವಣೆ ಹಾಗೂ ಥಣಿಸಂದ್ರ ಮತ್ತು ಬ್ಯಾಟರಾಯನಪುರ ವಾರ್ಡ್ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿ ಕೈಗೆತ್ತಿಕೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
‘ಬಹಳ ವರ್ಷಗಳಿಂದ ಅವಶ್ಯಕವಾಗಿ ಆಗಬೇಕಾಗಿದ್ದ ಹೈಟೆನ್ಷನ್ ಮಾರ್ಗದ ರಸ್ತೆ ಅಭಿ ವೃದ್ಧಿ ಕಾಮಗಾರಿಯು ನಾನಾ ಕಾರಣಗಳಿಂದ ತಡವಾಗಿತ್ತು. ಇದರಿಂದಾಗಿ, ಭುವನೇಶ್ವರಿನಗರ ಮುಖ್ಯರಸ್ತೆಯಲ್ಲಿ ವಾಹನದಟ್ಟಣೆ ಹೆಚ್ಚಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು. ಈ ರಸ್ತೆಯು ಪರ್ಯಾಯ ರಸ್ತೆಯಾಗಿರುವುದರಿಂದ ಇಲ್ಲಿ ಒಳಚರಂಡಿ ಮತ್ತು ಕಾವೇರಿನೀರು ಯೋಜನೆ ಕಾಮಗಾರಿ ಪೂರ್ಣಗೊಳಿಸಿ, ₹50 ಲಕ್ಷ ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಇದರಿಂದ ಈ ಭಾಗದ ಜನರ ಬಹಳ ದಿನಗಳ ಬೇಡಿಕೆ ಈಡೇರುವ ಮೂಲಕ ಈ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ’ ಎಂದರು.
ಪಾಲಿಕೆಯ ಮಾಜಿ ಸದಸ್ಯ ರಾದ ಕೆ.ಎಂ.ಚೇತನ್, ಪಿ.ವಿ.ಮಂಜುನಾಥಬಾಬು, ಕಾಂಗ್ರೆಸ್ ಮುಖಂಡರಾದ ಎನ್.ಎನ್.ಶ್ರೀನಿವಾಸಯ್ಯ, ಡಿ.ಬಿ.ಸುರೇಶ್ ಗೌಡ, ಪಳನಿ ವೆಂಕಟೇಶ್, ಎಚ್.ಎ.ಶಿವಕುಮಾರ್, ಗೌರೀಶ್ ಇದ್ದರು.