ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಕೈಗೊಳ್ಳಲು ನಿರ್ಧರಿಸಿರುವ ಭ್ರಷ್ಟಾಚಾರದ ವಿರುದ್ಧದ ರಥಯಾತ್ರೆಯನ್ನು ಪ್ರಗತಿಪರ ಸಂಘಟನೆಗಳ ಮುಖಂಡರು ತೀವ್ರವಾಗಿ ಖಂಡಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದಲಿತ ಪ್ಯಾಂಥರ್ಸ್ ಆಫ್ ಇಂಡಿಯಾದ ರಾಜ್ಯ ಘಟಕದ ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡಿ, `ಅಡ್ವಾಣಿ ಅವರು ಕೈಗೊಂಡಿರುವ ರಥಯಾತ್ರೆಯು ಭ್ರಷ್ಟಾಚಾರದ ಉದ್ದೇಶ ಹೊಂದಿಲ್ಲ. ಇದರ ಹಿಂದೆ ರಾಜಕೀಯ ಉದ್ದೇಶವಿದೆ. ದೇಶದಲ್ಲಿ ಹಿಂದುತ್ವ ಬಲಪಡಿಸುವ ಸಲುವಾಗಿ ಕೈಗೊಂಡಿರುವ ಯಾತ್ರೆಯಾಗಿದೆ~ ಎಂದು ಅವರು ಟೀಕಿಸಿದರು.
`ರಾಮ ಮಂದಿರ ನಿರ್ಮಾಣ ವೇಳೆ ಕೈಗೊಂಡಿದ್ದ ಯಾತ್ರೆಯಿಂದ ಕೋಮು ಸಂಘರ್ಷಗಳು ಉಂಟಾಗಿತ್ತು. ಇದರಿಂದ ಸಾವು ನೋವುಗಳು ಕೂಡ ಸಂಭವಿಸಿತ್ತು. ಭ್ರಷ್ಟಾಚಾರ ವಿರುದ್ಧ ಯಾತ್ರೆಗೆ ಅಡ್ಡಿ ಇಲ್ಲ. ಆದರೆ ಆಡ್ವಾಣಿ ನೇತೃತ್ವದ ಯಾತ್ರೆಗೆ ಸಂಘಟನೆಯ ವಿರೋಧವಿದೆ~ ಎಂದು ಹೇಳಿದರು.
ಜಾತಿ ವಿನಾಶ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಲಕ್ಷಣ್ ಮಾತನಾಡಿ, `ರಥಯಾತ್ರೆಯು ದೇಶದಲ್ಲಿ ಮತ್ತೆ ಕೋಮು ಸಂಘರ್ಷಕ್ಕೆ ಎಡೆಮಾಡಿಕೊಡಲಿದೆ. ಯಾತ್ರೆಯು ಕೇವಲ ನೆಪ ಮಾತ್ರವಾಗಿದ್ದು, ಮುಂಬರುವ ಲೋಕಸಭೆ ಚುನಾವಣೆಗೆ ಸಿದ್ದತೆ ನಡೆಸುವ ದುರುದ್ದೇಶ ಯಾತ್ರೆಯಲ್ಲಿದೆ~ ಎಂದರು.
`ಯಾವುದೇ ಸರ್ಕಾರಗಳಾಗಲೀ ಕೋಮು ಸಾಮರಸ್ಯ ಕದಡುವ ಯಾತ್ರೆಗಳನ್ನು ನಡೆಸಲು ಅನುಮತಿ ನೀಡಬಾರದು. ಕೋಮುವಾದಿಗಳು ನಡೆಸುವ ಯಾತ್ರೆಗೆ ಯಾರೂ ಪ್ರೋತ್ಸಾಹಿಸಬಾರದು~ ಎಂದು ಮನವಿ ಮಾಡಿದ ಅವರು, `ಯಾತ್ರೆಗೆ ಅನುಮತಿ ನೀಡಿದ್ದೇ ಆದರೆ ಆ ವೇಳೆ ಉಂಟಾಗುವ ಅನಾಹುತಗಳಿಗೆ ರಥಯಾತ್ರೆ ನಡೆಸುವವರನ್ನೇ ಹೊಣೆಗಾರರನ್ನಾಗಿ ಮಾಡಬೇಕು~ ಎಂದು ಸರ್ಕಾರವನ್ನು ಆಗ್ರಹಿಸಿದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಘಟಕದ ಅಧ್ಯಕ್ಷ ಇಲ್ಯಾಸ್ ಮಹಮದ್ ತುಂಬೆ, ದಲಿತ ಕ್ರೈಸ್ತ ಒಕ್ಕೂಟದ ಫಾದರ್ ಮನೋಹರ್ ಚಂದ್ರ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.