ನೆಲಮಂಗಲ: `ಅರ್ಕಾವತಿ ನದಿ ಪಾತ್ರದಲ್ಲಿ ನಿರ್ಮಾಣಗೊಂಡಿರುವ ಕಟ್ಟಡಗಳನ್ನು ತೆರವುಗೊಳಿಸುವಂತೆ ನೀಡಿರುವ ಆದೇಶವನ್ನು ವಿರೋಧಿಸಿ ಅರ್ಕಾವತಿ ಅಚ್ಚುಕಟ್ಟು ವ್ಯಾಪ್ತಿಯ ನೂರಾರು ಜಮೀನು ಮಾಲೀಕರು, ನಿವಾಸಿಗಳು ರಾಷ್ಟ್ರೀಯ ಹೆದ್ದಾರಿ 4ರ ಮಾಕಳಿ ಬಳಿ ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಿದರು.
ಭಾನುವಾರ ಬೆಳಿಗ್ಗೆ ನಡೆದ ಪ್ರತಿಭಟನೆಯಿಂದ ಕೆಲಕಾಲ ರಾಷ್ಟ್ರೀಯ ಹೆದ್ದಾರಿ 4ರ ಸಂಚಾರ ಸ್ಥಗಿತಗೊಂಡು ವ್ಯತ್ಯಯ ಉಂಟಾದ್ದರಿಂದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.
ವಿಧಾನ ಪರಿಷತ್ ಸದಸ್ಯ ಇ.ಕೃಷ್ಣಪ್ಪ ಮಾತನಾಡಿ, `ನಂದಿ ಬೆಟ್ಟದಿಂದ ತಿಪ್ಪಗೊಂಡನಹಳ್ಳಿಯವರೆಗೆ ನದಿ ಪಾತ್ರದ 60 ಕಿ.ಮೀ. ಪ್ರದೇಶದ ಇಕ್ಕೆಲಗಳಲ್ಲಿ 1.ಕಿ.ಮೀವರೆಗೆ ಯಾವುದೇ ಬಡಾವಣೆ ಮತ್ತು ಕಟ್ಟಡ ನಿರ್ಮಿಸಬಾರದು ಎಂಬ ಆದೇಶ ನೀಡಲಾಗಿದೆ. ಈಗಾಗಲೇ ಸಾವಿರಾರು ಮನೆಗಳು ನಿರ್ಮಾಣವಾಗಿವೆ. ಸರ್ಕಾರದ ಆದೇಶದಿಂದ ಸಾವಿರಾರು ಮಂದಿ ಸಂಕಷ್ಟಕ್ಕೆ ಸಿಲುಕಲಿದ್ದಾರೆ' ಎಂದರು.
ಸ್ಥಳೀಯ ಉದ್ಯಮಿ ರಂಗಸ್ವಾಮಿ, ಆಲೂರು ಮೂರ್ತಿ, ಉದ್ಯಮಿ ಎಚ್.ರವಿ, ಮುಖಂಡರಾದ ತಿಮ್ಮರಸಯ್ಯ, ವೆಂಕಟೇಶ್, ಜಿ.ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಅಪಘಾತ- ಸ್ಥಳದಲ್ಲೇ ಸಾವು: ಅತ್ತೆಗೆ ಬಾಗಿನ ಕೊಡಲು ಬರುತ್ತಿದ್ದ ಅಳಿಯ ರಸ್ತೆ ದಾಟುತ್ತಿದ್ದಾಗ ಕಾರಿಗೆ ಸಿಕ್ಕಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಭಾನುವಾರ ಬೆಳಿಗ್ಗೆ ಯಂಟಗಾನಹಳ್ಳಿ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರ 48ರ ಕುದೂರು ಬಳಿ ಲಕ್ಕೆನಹಳ್ಳಿಯ ಪ್ರದೀಪ್(16) ಮೃತಪಟ್ಟವರು. ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಕೆಲ ಕಾಲ ರಸ್ತೆ ತಡೆ ನಡೆಸಿದರು.