ಬೆಂಗಳೂರು: ಡಿ.ಎಂ.ಕೆ. ಹಿರಿಯ ನಾಯಕ ಕೆ.ಅನ್ಬಳಗನ್ ಅವರು ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಕರ್ನಾಟಕ ಹೈಕೋರ್ಟ್ ಸರ್ಕಾರದ ವಿಶೇಷ ವಕೀಲ ಭವಾನಿ ಸಿಂಗ್ ಅವರಿಗೆ ಸೂಚಿಸಿದೆ.
ನ್ಯಾಯಮೂರ್ತಿ ಕೆ.ಎಲ್. ಮಂಜು ನಾಥ್ ಹಾಗೂ ನ್ಯಾಯಮೂರ್ತಿ ಎಸ್.ಸುಜಾತ ಅವರನ್ನೊಳಗೊಂಡ ವಿಭಾಗೀಯ ಪೀಠವು ಶನಿವಾರ ಈ ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸಿತು. ಅಂತೆಯೇ ತಮಿಳುನಾಡಿನ ಭ್ರಷ್ಟಾಚಾರ ನಿಗ್ರಹ ದಳಕ್ಕೂ ಅರ್ಜಿದಾರರ ಅಹವಾಲು ಪ್ರತಿ ರವಾನಿಸಲು ಸೂಚಿಸಿತು.
‘ಎಐಎಡಿಎಂಕೆ ನಾಯಕಿ ಜಯಲಲಿತಾ ಅವರ ಅಕ್ರಮ ಆಸ್ತಿಗಳಿಕೆ ಪ್ರಕರಣದ ಮೇಲ್ಮನವಿಯಲ್ಲಿ ಪ್ರಾಸಿಕ್ಯೂಷನ್ ಪರವಾಗಿ ವಾದ ಮಂಡಿಸುತ್ತಿರುವ ಕರ್ನಾಟಕ ಸರ್ಕಾರದ ವಿಶೇಷ ವಕೀಲ ಭವಾನಿ ಸಿಂಗ್ ಮುಂದುವರಿಕೆ ನ್ಯಾಯ ಸಮ್ಮತವಲ್ಲ’ ಎಂದು ಅನ್ಬಳಗನ್ ಈ ಮೊದಲು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠವು ವಜಾ ಮಾಡಿತ್ತು.
ವಿಚಾರಣೆಯನ್ನು ಫೆ.2ಕ್ಕೆ (ಸೋಮವಾರ) ಮುಂದೂಡಲಾಗಿದೆ. ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು ಅನ್ಬಳಗನ್ ಪರ ಹಾಜರಾಗಿದ್ದರು.