ಬೆಂಗಳೂರು: ನಗರದ ಹೊರವಲಯದ ಉಲ್ಲಾಳ ಉಪನಗರದಲ್ಲಿ ಗುರುವಾರ ರಾತ್ರಿ ಆಟೊ ಚಾಲಕ ಮಹಮದ್ ಪೀರ್ (38) ಎಂಬುವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಮಾಡಿದ್ದಾರೆ.
ಮಹಮದ್, ಸ್ನೇಹಿತರೊಂದಿಗೆ ಸಂಬಂಧಿಕರ ಮದುವೆಗೆ ಹೋಗಿದ್ದರು. ಮದುವೆ ಮುಗಿಸಿಕೊಂಡು ರಾತ್ರಿ 9.15ರ ಸುಮಾರಿಗೆ ಒಬ್ಬರೇ ಬೈಕ್ನಲ್ಲಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಐದು ಬೈಕ್ನಲ್ಲಿ ಬಂದ ಹತ್ತು ಮಂದಿ ದುಷ್ಕರ್ಮಿಗಳು ಉಲ್ಲಾಳ ಉಪನಗರದ ಮುಖ್ಯರಸ್ತೆಯಲ್ಲಿ ಅಡ್ಡಗಟ್ಟಿದ್ದಾರೆ. ನಂತರ ಮಚ್ಚಿನಿಂದ ಕೊಚ್ಚಿ ಅವರನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಹಮದ್, ಇತ್ತೀಚೆಗೆ ಗಾಂಜಾ ಮಾರಾಟ ಮಾಡುತ್ತಿದ್ದ ಗುಂಪಿನೊಂದಿಗೆ ಜಗಳ ಮಾಡಿಕೊಂಡಿದ್ದರು. ಆ ಗುಂಪಿನ ಮೂವರನ್ನು ಪೊಲೀಸರು ಬಂಧಿಸಿದ್ದರು. ಈ ದ್ವೇಷಕ್ಕಾಗಿ ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕೆ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಹಮದ್ ಅವರ ಕುಟುಂಬ ದವರು ಬೀಡಿ ಕಟ್ಟುವ ಕೆಲಸ ಮಾಡುತ್ತಾರೆ. ತಾವರೆಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.