ಬೆಂಗಳೂರು: ಹಿರಿಯ ಸಂಗೀತ ಸಾಧಕ ಆರ್.ಕೆ.ಶ್ರೀಕಂಠನ್ ಅವರು ಗುರುವಾರ ಪಂಚಭೂತಗಳಲ್ಲಿ ಲೀನವಾಗುವ ಮೂಲಕ ಪ್ರಕೃತಿಯ ಶ್ರುತಿಯಲ್ಲಿ ಒಂದಾದರು.
ಬೆಂಗಳೂರಿನ ಚಾಮರಾಜಪೇಟೆಯ ಸ್ಮಶಾನದಲ್ಲಿ ಅಂತಿಮ ವಿಧಿ ವಿಧಾನ ಜರುಗಿತು. ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು. ಪತ್ನಿ ಮೈತ್ರೇಯಿ, ಪುತ್ರಿಯರಾದ ರತ್ನಮಾಲಾ ಪ್ರಕಾಶ್, ಉಮಾ, ವಿಜಯಾ, ಚಂದ್ರಿಕಾ, ನಳಿನಿ, ಪುತ್ರ ರಮಾಕಾಂತ ಅಂತಿಮ ದರ್ಶನ ಪಡೆದರು.
‘ಸಂಸ’ದಲ್ಲಿ ಸಾರ್ವಜನಿಕ ವೀಕ್ಷಣೆ: ಇದಕ್ಕೂ ಮೊದಲು ಪಾರ್ಥಿವ ಶರೀರವನ್ನು ಎರಡು ಗಂಟೆಗಳ ಕಾಲ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ಸಾರ್ವಜನಿಕ ವೀಕ್ಷಣೆಗೆ ಇಡಲಾಗಿತ್ತು. ಇಸ್ರೊ ಅಧ್ಯಕ್ಷ ಪ್ರೊ.ಕೆ.ರಾಧಾಕೃಷ್ಣನ್, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಂ, ಸುಗಮ ಸಂಗೀತ ಗಾಯಕರಾದ ಶ್ರೀನಿವಾಸ ಉಡುಪ, ವೈ.ಕೆ.ಮುದ್ದುಕೃಷ್ಣ, ಕಿಕ್ಕೇರಿ ಕೃಷ್ಣಮೂರ್ತಿ, ಮಾಲತಿ ಶರ್ಮ, ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಅಂತಿಮ ದರ್ಶನ ಪಡೆದರು. ಗಾಯಕರಾದ ವಿದ್ಯಾಭೂಷಣ, ಪಿ.ರಮಾ, ಚಂದ್ರಿಕಾ, ಕಾಸರವಳ್ಳಿ ಸಹೋದರಿಯರು, ಟಿ.ಎಸ್.ಸತ್ಯವತಿ, ಎಂ.ಎಸ್.ಶೀಲಾ ಶಾಸ್ತ್ರೀಯ ಸಂಗೀತ ಪ್ರಸ್ತುತ ಪಡಿಸಿದರು.