ಬೆಂಗಳೂರು: ನಗರದ ಪಾಕೃತಿಕ ಸೊಬಗನ್ನು ಹಿಡಿದಿಟ್ಟಿರುವ ವೃಕ್ಷಗಳ ಕುರಿತ ‘ನೆರಳು’–ಬೆಂಗಳೂರು ಮರಗಳ ಉತ್ಸವವನ್ನು ಫೆಬ್ರುವರಿ 8 ಹಾಗೂ 9 ರಂದು ಕಬ್ಬನ್ ಉದ್ಯಾನದಲ್ಲಿ ಆಯೋಜಿಸಲಾಗಿದೆ.
ವೃಕ್ಷಗಳಿಂದಾಗಿಯೇ ನಗರಕ್ಕೆ ಪಾರಂಪರಿಕ ಮೆರುಗು ದೊರಕಿದೆ. ಜಾಗತೀಕರಣದ ಹಿನ್ನೆಲೆಯಲ್ಲಿ ಸಾಗುತ್ತಿರುವ ಅಭಿವೃದ್ಧಿಯ ಭರಾಟೆಯಲ್ಲಿ ಮರಗಳ ಮಾರಣಹೋಮ ನಡೆಯುತ್ತಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವೃಕ್ಷಗಳ ಕುರಿತು ಎರಡು ದಿನಗಳ ಅಭಿಯಾನಕ್ಕೆ ಕಬ್ಬನ್ ಉದ್ಯಾನ ವೇದಿಕೆಯಾಗಲಿದೆ.
ಸಾರ್ವಜನಿಕ ಉದ್ಯಾನಗಳು ಹಾಗೂ ಅವುಗಳ ಸಂರಕ್ಷಣೆ, ಸ್ಥಳೀಯ, ಜಾಗತಿಕ ಮಟ್ಟದಲ್ಲಿ ಮರಗಳ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ, ಜೈವಿಕ ವೈವಿಧ್ಯ ಕುರಿತ ಕತೆ ನಿರೂಪಣೆ, ಮರಗಳ ಅಪ್ಪಿಕೊ ಅಭಿಯಾನ ನಡೆಯಲಿದ್ದು, ಪರಿಸರ ಪ್ರೇಮಿಗಳು, ತಜ್ಞರು, ತಂತ್ರಜ್ಞರು, ಇತಿಹಾಸಜ್ಞರು ಕೈಜೋಡಿಸಲಿದ್ದಾರೆ. ಕಾರ್ಯಕ್ರಮವು ಕ್ರೌಡ್ ಫಂಡಿಂಗ್ (ಜನಧನ) ಮೂಲಕ ಆಯೋಜನೆಗೊಳ್ಳುತ್ತಿದ್ದು, ಆಸಕ್ತರು ಕೆಳಕಂಡ ವೆಬ್ಸೈಟ್ ಸಂಪರ್ಕಿಸಬಹುದು. www.neralu.in/donate/