ಬೆಂಗಳೂರು: ಹೊಸ ಬಡಾವಣೆ ಅಭಿವೃದ್ಧಿಪಡಿಸಿ ಕಡಿಮೆ ಬೆಲೆಗೆ ನಿವೇಶನ ಹಂಚಿಕೆ ಮಾಡುವುದಾಗಿ ವಿಧಾನ ಪರಿಷತ್ ಸಚಿವಾಲಯದ ನೌಕರರಿಗೆ ವಂಚಿಸಿದ ಆರೋಪದಡಿ ಬಂಧಿತನಾಗಿರುವ ಕೆ.ವಿ. ವೆಂಕಟೇಶ್ ಇನ್ನೂ 115 ಮಂದಿಗೆ ಇದೇ ರೀತಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ನಿವೇಶನದ ಆಸೆಗೆ ಈತನಿಗೆ ಹಣ ಕೊಟ್ಟವರ ಜತೆ ಬಾಗಲೂರು ಠಾಣೆ ಇನ್ಸ್ಪೆಕ್ಟರ್ ಎ. ಅಂಜನ್ ಕುಮಾರ್ ಭಾನುವಾರ ಸಭೆ ನಡೆಸಿದರು. ಈ ವೇಳೆ ‘ನಾವು ಸಹ ವೆಂಕಟೇಶ್ಗೆ ಹಣ ಕೊಟ್ಟಿದ್ದೇವೆ’ ಎಂದು 115 ಮಂದಿ ದಾಖಲೆ ಪತ್ರಗಳ ಪ್ರತಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿಯು ಬಡಾವಣೆ ಅಭಿವೃದ್ಧಿಪಡಿಸಿ ನಿವೇಶನ ನೀಡುವುದಾಗಿ ‘ವಿಧಾನ ಪರಿಷತ್ ಸಚಿವಾಲಯ ನೌಕರರ ಕಲ್ಯಾಣ ವೇದಿಕೆ’ಯ 360 ಸದಸ್ಯರಿಗೆ ₹23 ಕೋಟಿ ವಂಚನೆ ಮಾಡಿದ್ದ ಆರೋಪ ಎದುರಿಸುತ್ತಿದ್ದಾನೆ. ಸದ್ಯ ಆತನನ್ನು ಬಂಧಿಸಿರುವ ಬಾಗಲೂರು ಪೊಲೀಸರು, ಹೆಚ್ಚಿನ ವಿಚಾರಣೆ ನಡೆಸಿ ಜಾಲದ ಬಗ್ಗೆ ಕೆದಕುತ್ತಿದ್ದಾರೆ.