ಬೆಂಗಳೂರು: ನಗರದ ಜವಾಹರಲಾಲ್ ಉನ್ನತ ವೈಜ್ಞಾನಿಕ ಸಂಶೋಧನಾ ಸಂಸ್ಥೆ ಹಾಗೂ ಸಿ.ಎನ್.ಆರ್. ರಾವ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಗರದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ. ಜಿ. ಮುಗೇಶ್ ಹಾಗೂ ಕಾನ್ಪುರದ ಐಐಟಿಯ ಪ್ರಾಧ್ಯಾಪಕ ಪ್ರೊ. ಸಂದೀಪ್ ವರ್ಮಾ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜೀವವಿಜ್ಞಾನ ಹಾಗೂ ರಸಾಯನ ವಿಜ್ಞಾನದ ಕುರಿತ ಸಂಶೋಧನೆಗಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ.
ಮುಗೇಶ್ ಅವರು ಭಾರತಿದಾಸನ್ ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ (ರಸಾಯನವಿಜ್ಞಾನ) ಹಾಗೂ ಮುಂಬೈ ಐಐಟಿಯಿಂದ ಪಿಎಚ್.ಡಿ ಪದವಿ ಪಡೆದಿದ್ದಾರೆ. ರಾಸಾಯನಿಕ ಜೀವವಿಜ್ಞಾನ, ವೈದ್ಯಕೀಯ ರಸಾಯನ ವಿಜ್ಞಾನ ಕ್ಷೇತ್ರದಲ್ಲಿ ಹಲವು ಸಂಶೋಧನೆಗಳನ್ನು ಮಾಡಿದ್ದಾರೆ.
ಅವರಿಗೆ ಭಾಗ್ಯತಾರಾ ಪ್ರಶಸ್ತಿ, ಶಾಂತಿ ಸ್ವರೂಪ ಭಟ್ನಾಗರ್ ಪ್ರಶಸ್ತಿ, ಸಿಆರ್ಎಸ್ಐ ಪ್ರಶಸ್ತಿ ಲಭಿಸಿವೆ. ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ, ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿಯ ಫೆಲೊ ಆಗಿದ್ದಾರೆ.
ಕಾನ್ಪುರ ಐಐಟಿಯ ರಸಾಯನ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿರುವ ವರ್ಮಾ ಅವರು, ಪರಿಸರ ವಿಜ್ಞಾನ ಹಾಗೂ ಎಂಜಿನಿಯರಿಂಗ್ ಕೇಂದ್ರದ ಸಂಯೋಜಕರೂ ಹೌದು. ಅವರಿಗೆ ಸಿ.ಎನ್.ಆರ್. ರಾವ್ ಸಂಶೋಧನಾ ಪ್ರಶಸ್ತಿ, ಐಸಿಎಸ್ಬಿ ಪ್ರಶಸ್ತಿ, ಶಾಂತಿ ಸ್ವರೂಪ ಭಟ್ನಾಗರ ಪ್ರಶಸ್ತಿ ಲಭಿಸಿವೆ.