ಬೆಂಗಳೂರು: ನಗರದೆಲ್ಲೆಡೆ ಸಂಭ್ರಮ ಹಾಗೂ ಸಡಗರದಿಂದ ವಿಜಯದಶಮಿ ಹಬ್ಬವನ್ನು ಆಚರಿಸಲಾಯಿತು.
ಪರಸ್ಪರ ಬನ್ನಿ ನೀಡಿ ಶುಭಾಶಯ ವಿನಿಮಯ ಮಾಡಿಕೊಂಡ ಜನರು, ದೇವಸ್ಥಾನಗಳಲ್ಲಿ ನಡೆದ ಪಲ್ಲಕ್ಕಿ ಉತ್ಸವಗಳಲ್ಲಿ ಭಾಗಿಯಾಗಿ ಸಂಭ್ರಮಿಸಿದರು.
ವಾಹನಗಳ ಪೂಜೆ ಶುಕ್ರವಾರವೂ ಮುಂದುವರಿದಿತ್ತು. ಬಂಗಾಳಿ ಸಮುದಾಯದವರು ಹಲಸೂರು ಕೆರೆಯ ಬಳಿ ನೃತ್ಯ ಮಾಡಿ ಸಂಭ್ರಮಿಸಿದರು. ಸಂಪ್ರದಾಯದ ಪ್ರಕಾರ ಪೂಜೆ ಮಾಡಿ ದುರ್ಗೆಯ ಮೂರ್ತಿಯನ್ನು ವಿಸರ್ಜಿಸಿದರು.
ನಗರದ ಹಲಸೂರು ಕೆರೆಯಲ್ಲಿ ಶುಕ್ರವಾರ ಬೆಂಗಾಲಿ ಸಮುದಾಯದ ಜನರು ದುರ್ಗಾದೇವಿ ವಿಸರ್ಜನೆ ಸಮಯದಲ್ಲಿ ಸಂಭ್ರಮಿಸಿದ ಕ್ಷಣ –ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್
ಮಲ್ಲೇಶ್ವರದಲ್ಲಿರುವ ಸರ್ಕಲ್ ಮಾರಮ್ಮ ದೇವಸ್ಥಾನದ ಮುಂದೆ ಸೇರಿದ್ದ ನೂರಾರು ಭಕ್ತರು ಪೂಜೆಯಲ್ಲಿ ಭಾಗವಹಿಸಿದ್ದರು. ದೇವಸ್ಥಾನದ ಎದುರು ವಾಹನಗಳಿಗೆ ಪೂಜೆ ಮಾಡಿಸಿದರು.
ಮಾರುಕಟ್ಟೆಯಲ್ಲಿ ಹೂ, ಹಣ್ಣು, ಬಾಳೆ ಕಂದು, ಕುಂಬಳಕಾಯಿ, ಮಾವಿನ ಎಲೆ, ಕಬ್ಬು ಮಾರಾಟದ ಅಬ್ಬರ ಜೋರಿತ್ತು. ಪಟಾಕಿ ಸಿಡಿಸಿ ಜನರು ಸಂಭ್ರಮಿಸಿದರು.