ಕೃಷ್ಣರಾಜಪುರ : ‘ಒಂದು ತಿಂಗಳಿಂದ ರಾಮಮೂರ್ತಿನಗರ 1ನೇ ಅಡ್ಡರಸ್ತೆ ನಿವಾಸಿಗಳಿಗೆ ಚರಂಡಿಯ ಕಲುಷಿತ ನೀರು ಮಿಶ್ರಿತ ಕಾವೇರಿ ನೀರು ಪೂರೈಕೆಯಾಗುತ್ತಿದೆ. ಇದು ಕೆಟ್ಟ ವಾಸನೆಯಿಂದ ಕೂಡಿದ್ದು ಆರೋಗ್ಯದ ಮೇಲೆ ಕೆಟ್ಟಪರಿಣಾಮ ಬೀರುತ್ತದೆ’ ಎಂದು ನಿವಾಸಿಗಳು ದೂರಿದರು.
‘ಮಳೆ ನೀರು ಕಾಲುವೆಯನ್ನು ಸ್ವಚ್ಛಗೊಳಿಸಿಲ್ಲ. ಚರಂಡಿ ಕಟ್ಟಿಕೊಂಡಿದ್ದು ಸಂಗ್ರಹವಾದ ನೀರು ಸರಾಗವಾಗಿ ಹರಿಯಲು ದಾರಿಯಿಲ್ಲ. ಹೀಗಾಗಿ ಕಾವೇರಿ ನೀರಿನ ಜತೆಗೆ ಚರಂಡಿ ನೀರು ಸೇರಿ ಕಲುಷಿತಗೊಂಡಿದೆ. ಸಮಸ್ಯೆಯ ಬಗ್ಗೆ ಈಗಾಗಲೇ ಜಲಮಂಡಳಿ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಆದರೆ ಇದುವರೆಗೂ ಕ್ರಮಗೊಂಡಿಲ್ಲ’ ಎಂದು ನಿವಾಸಿಗಳಾದ ಸುಧಾ, ಗೋಪಾಲ್ ದೂರಿದರು.
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಾಂತ ಪ್ರತಿಕ್ರಿಯಿಸಿ, ‘ಕಲುಷಿತ ನೀರು ಪೂರೈಕೆಯಾಗುತ್ತಿರುವ ಬಗ್ಗೆ ನಿವಾಸಿಗಳು ದೂರು ಸಲ್ಲಿಸಿದ್ದಾರೆ. ಎರಡು ವರ್ಷಗಳ ಹಿಂದೆ ಕಾವೇರಿ ನೀರು ಪೂರೈಕೆಗೆ ಕೊಳವೆ ಅಳವಡಿಸಲಾಗಿದೆ. ಕೊಳವೆ ಮಾರ್ಗದಲ್ಲಿ ಸಂಪರ್ಕ ಕಡಿತಗೊಂಡು ಅವ್ಯವಸ್ಥೆಗೆ ಕಾರಣವಾಗಿರಬಹುದು. ಒಂದು ವಾರದಲ್ಲಿ ಸಮಸ್ಯೆಯನ್ನು ಬಗೆಹರಿಸಲಾಗುವುದು’ ಎಂದು ಭರವಸೆ ನೀಡಿದರು.