ನೆಲಮಂಗಲ: ‘ಅಧಿಕಾರ ಎಂದಿಗೂ ಶಾಶ್ವತವಲ್ಲ. ಆದ್ದರಿಂದ, ಅಧಿಕಾರದಲ್ಲಿ ಇರುವವರು ಸಮಾಜಕ್ಕೆ ಕೊಡುಗೆ ನೀಡುವ ಪಣ ತೊಡಬೇಕು’ ಎಂದು ಸಣ್ಣ ನೀರಾವರಿ ಸಚಿವ ಶಿವರಾಜ.ಎಸ್. ತಂಗಡಗಿ ಹೇಳಿದರು. ಸಮೀಪದ ಮಾದನಾಯಕ ನಹಳ್ಳಿಯಲ್ಲಿ ಸಿದ್ಧರಾಮೇಶ್ವರ ಭೋವಿ ವೆಲ್ಫೇರ್ ಟ್ರಸ್ಟ್ ವತಿಯಿಂದ ನಿರ್ಮಿಸಿರುವ ನೂತನ ಭೋವಿ ಸಮುದಾಯ ಭವನವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಎಲೆಮರೆಕಾಯಿಗಳಂತೆ ಸೇವೆ ಸಲ್ಲಿಸುತ್ತಿರುವ ಸಾಧಕರು, ಅಧಿಕಾರಿಗಳು, ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ’ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ತಂಗಡಗಿ ಅವರು ಸಮುದಾಯ ಭವನಕ್ಕೆ 10 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದರು.
ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಅವರು ಮಾತನಾಡಿ, ‘ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಯಾವುದೇ ಟ್ರಸ್ಟ್ ಅಥವಾ ಸಂಘದ ಹೆಸರಿನಲ್ಲಿ ಭೂಮಿ ಇದ್ದರೆ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ನೀಡುವ ಅವಕಾಶವಿದೆ’ ಎಂದು ಹೇಳಿದರು.
ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ‘ಸಮುದಾಯ ಭವನವನ್ನು ಬಡವರಿಗೆ ರಿಯಾಯಿತಿ ದರದಲ್ಲಿ ನೀಡಿ, ಭವನದಿಂದ ಬಂದ ಆದಾಯವನ್ನು ಸಮಾಜದ ಏಳಿಗೆಗೆ ಬಳಸಿ’ ಎಂದರು.