ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಗುರುವಾರ ಜೆ.ಎಚ್. ಪಟೇಲ್ ಅವರ ತಮಾಷೆ ಪ್ರಸಂಗಗಳು ಒಂದರ ಬೆನ್ನಹಿಂದೆ ಒಂದರಂತೆ ಸ್ಫೋಟಗೊಂಡವು. ಆ ಮೂಲಕ ಅವರ ಗೆಳೆಯರು, ಅಭಿಮಾನಿಗಳು ಹಾಗೂ ಕುಟುಂಬದ ಸದಸ್ಯರು ಅವರ ಸ್ಮರಣೆಯಲ್ಲಿ ಸಂಭ್ರಮಪಟ್ಟರು.
ಜೆ.ಎಚ್.ಪಟೇಲ್ ಪ್ರತಿಷ್ಠಾನ ಗುರುವಾರ ಏರ್ಪಡಿಸಿದ್ದ ಪಟೇಲರ ಸ್ಮರಣೋತ್ಸವ ಸಮಾರಂಭ ದಲ್ಲಿ ಅವರಿಲ್ಲದ ವಿಷಾದಕ್ಕಿಂತ, ಅವರ ನೆನಪಿನ ಸಂಭ್ರಮವೇ ತುಂಬಿತ್ತು. ಕಾರ್ಯಕ್ರಮ ಉದ್ಘಾ ಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಪಟೇಲರ ತಮಾಷೆ ಪ್ರಸಂಗವನ್ನು ನೆನೆಯಲು ಹಿಂದೆ ಬೀಳಲಿಲ್ಲ.
‘ಪಟೇಲರು ಮುಖ್ಯಮಂತ್ರಿ ಆಗಿದ್ದಾಗ ಮಲ್ಲಿ ಕಾರ್ಜುನ ಖರ್ಗೆ ವಿರೋಧ ಪಕ್ಷದ ನಾಯಕರಾಗಿ ದ್ದರು. ವಿದ್ಯುತ್ ಅಭಾವದ ಬಗೆಗೆ ಖರ್ಗೆ ಗಂಟೆ ಗಟ್ಟಲೆ ಮಾತನಾಡಿದರು. ರಾಜ್ಯದಲ್ಲಿ ಯಾವಾ ಗಲೂ ವಿದ್ಯುತ್ ಇರುವುದಿಲ್ಲ ಎಂದು ದೂರಿದರು.
‘ಎಲ್ಲವನ್ನೂ ಸಾವಧಾನದಿಂದ ಕೇಳಿಸಿಕೊಂಡ ಪಟೇಲರು, ‘ವಿದ್ಯುತ್ ಇಲ್ಲವೆಂದು ಇಷ್ಟೆಲ್ಲ ರೋಷಾ ವೇಶ ಪ್ರದರ್ಶನ ಮಾಡುತ್ತೀರಲ್ಲ, ಒಮ್ಮೆ ವಿದ್ಯುತ್ ಪೂರೈಕೆ ತಂತಿ ಮುಟ್ಟಿ ನೋಡಿ ಎನ್ನುವ ಮೂಲಕ ಹಾಸ್ಯಪ್ರಜ್ಞೆ ಮೆರೆದಿದ್ದರು’ ಎಂದರು ಮುಖ್ಯಮಂತ್ರಿ. ಆಗ ಸಭಾಂಗಣದಲ್ಲಿ ನಗೆಯ ದೊಡ್ಡ ಅಲೆ.
ಸಚಿವ ಎಚ್. ಆಂಜನೇಯ ಕೂಡ ಪಟೇಲರ ಹಾಸ್ಯ ಪ್ರಸಂಗವನ್ನು ಮೆಲುಕು ಹಾಕಿದರು. ‘ಬೆಂಗ ಳೂರಿನಲ್ಲಿ ಸೌಂದರ್ಯ ಸ್ಪರ್ಧೆ ನಡೆದಾಗ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಅದಕ್ಕೆ ಪಟೇಲರು, ಪ್ರದರ್ಶಿಸುವವರು ಮತ್ತು ನೋಡುವವರ ಮಧ್ಯೆ ನಿಮಗೇನು ಕೆಲಸ ಎಂದಿದ್ದು ಇನ್ನೂ ನೆನಪಿನ ಲ್ಲಿದೆ’ಎಂದು ಅವರು ಹೇಳಿದಾಗ ಸಭಿಕರು ಮತ್ತೆ ಗೊಳ್ಳೆಂದು ನಕ್ಕರು.
‘ಮದಿರೆ ಮತ್ತು ಮಾನಿನಿ ನನ್ನ ದೌರ್ಬಲ್ಯ ಎಂದು ಪಟೇಲರಷ್ಟು ಧೈರ್ಯವಾಗಿ ಹೇಳಿದ ವ್ಯಕ್ತಿ ಬೇರಿಲ್ಲ’ ಎಂದೂ ಆಂಜನೇಯ ಹೇಳಿದರು. ಉದ್ಯಮಿ ಶ್ರೀಹರಿ ಖೋಡೆ, ‘ಸಾಹೇಬರು ತಾವು ಕಡಿಮೆ ಕುಡಿದು, ಜತೆಯಲ್ಲಿದ್ದವರಿಗೆ ಜಾಸ್ತಿ ಕುಡಿಸುತ್ತಿದ್ದರು’ ಎಂದು ಮೆಲುಕು ಹಾಕಿದರು.
ಸಭಾಂಗಣದಲ್ಲಿ ಕುಳಿತಿದ್ದ ಪಟೇಲರ ಅಭಿಮಾನಿ ಗಳೂ ತಮ್ಮ ನಾಯಕನನ್ನು ತಮಾಷೆ ಪ್ರಸಂಗಗಳ ಮೂಲಕವೇ ಸ್ಮರಿಸುತ್ತಿದ್ದರು.
‘ರಾಮಕೃಷ್ಣ ಹೆಗಡೆಯವರು ನಿಮಗೆ ಇಂಧನ ಖಾತೆ ಬೇಕೋ, ಅಬಕಾರಿ ಖಾತೆ ಬೇಕೋ ಎಂದು ಪಟೇಲರನ್ನು ಕೇಳಿದರಂತೆ. ಅದಕ್ಕೆ ಪಟೇಲರು, ‘ಒಂದು ಶಾಕ್ ಹೊಡೆಯುತ್ತೆ, ಮತ್ತೊಂದು ಕಿಕ್ ಕೊಡುತ್ತೆ. ನನಗೆ ಎರಡೂ ಖಾತೆ ಇಷ್ಟ’ ಎಂಬ ಉತ್ತರ ನೀಡಿದ್ದರಂತೆ’ ಎಂದು ಜಗಳೂರಿನಿಂದ ಬಂದಿದ್ದ ಅಭಿಮಾನಿಯೊಬ್ಬರು ಹೇಳುತ್ತಿದ್ದರು.
‘ಸರ್ಕಾರ ಏನೂ ಮಾಡಿಯೇ ಇಲ್ಲ ಎಂಬುದಾಗಿ ವಿರೋಧ ಪಕ್ಷದ ಸದಸ್ಯರು ಬೊಬ್ಬೆ ಹಾಕುತ್ತಾರೆ. ನೂರಾರು ಕಿ.ಮೀ.ಗಳಷ್ಟು ಉದ್ದದ ಕಾಲುವೆಗಳು ನಿರ್ಮಾಣವಾಗಿದ್ದು ಈ ಕುರುಡರಿಗೆ ಕಾಣುವುದೇ ಇಲ್ಲವೇ’ ಎನ್ನುವ ಮೂಲಕ ವಿರೋಧಿಗಳ ಕಾಲೆಳೆ ದಿದ್ದು ನನಗೂ ನೆನಪಿದೆ’ ಎಂದು ಮತ್ತೊಬ್ಬ ಅಭಿಮಾನಿ ವಿವರಿಸುತ್ತಿದ್ದರು.
ಪ್ರಾಸ್ತಾವಿಕ ಮಾತನಾಡಿದ ಮಹಿಮಾ ಪಟೇಲ್, ‘ನಮ್ಮ ತಂದೆಯವರ ಸ್ಮರಣೆ ಎಂದರೆ ನಮಗೆ ಅದೊಂದು ಸಂಭ್ರಮ’ ಎಂದು ಹೇಳಿದರು. ‘ರಾಜಕಾರಣಿಗಳ ತಲೆ ತಣ್ಣಗಿರಬೇಕು, ಹೃದಯ ಬೆಚ್ಚಗಿರಬೇಕು ಎನ್ನುತ್ತಿದ್ದ ನಮ್ಮ ತಂದೆ, ಹಾಗೇ ಬದುಕಿದ್ದರು’ ಎಂದು ಮಹಿಮಾ ಪಟೇಲ್ ಅವರು ಅಭಿಮಾನಪಟ್ಟರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಆರ್.ವಿ. ದೇಶಪಾಂಡೆ ಅವರು, ಪಟೇಲರ ನೇರ, ನಿಷ್ಠುರ ಸ್ವಭಾವ ಮತ್ತು ಜಾತ್ಯತೀತ ಮನೋ ಭಾವದ ಗುಣಗಾನ ಮಾಡಿದರು. ಪಟೇಲ್ ಅವರು ದ್ವೇಷದ ರಾಜಕಾರಣ ಮಾಡಲಿಲ್ಲ ಎಂದೂ ಹೊಗಳಿದರು.
‘ಶೂನ್ಯದಿಂದ ಬೆಳೆದ ನಾಯಕ’
ಬೆಂಗಳೂರು: ‘ಶೂನ್ಯದಿಂದ ನಾಯಕನಾಗಿ ಬೆಳೆದ ಪಟೇಲರು, ತಮ್ಮ ಕುಟುಂಬದವರನ್ನು ಅಧಿಕಾರದ ಹತ್ತಿರಕ್ಕೂ ಸೇರಿಸದ ಅಪರೂಪದ ರಾಜಕಾರಣಿ’ ಎಂದು ಚಿತ್ರದುರ್ಗದ ಮುರುಘ ರಾಜೇಂದ್ರ ಮಠದ ಡಾ. ಶಿವಮೂರ್ತಿ ಮುರಘಾ ಶರಣರು ಅಭಿಪ್ರಾಯಪಟ್ಟರು.
‘ಎಲ್ಲ ಜನಾಂಗದ ವ್ಯಕ್ತಿಗಳನ್ನು ಬೆಳೆಸಿದ ನಾಯಕ ಅವರಾಗಿದ್ದರು’ ಎಂದೂ ಹೇಳಿದರು. ‘ಮಹಿಮಾ ಪಟೇಲ್ಗೆ ಅವರ ಪಕ್ಷದ ನಾಯ ಕರು ಸ್ಥಾನಮಾನ ನೀಡಬೇಕು’ ಎಂದು ಸಲಹೆಯನ್ನೂ ನೀಡಿದರು.
‘ಕಾಂಗ್ರೆಸ್ನಲ್ಲಿ ತಾಳ್ಮೆ ಇರಬೇಕು. ಅಷ್ಟು ಸುಲಭವಾಗಿ ಇಲ್ಲಿ ಅವಕಾಶಗಳು ಸಿಗುವುದಿಲ್ಲ. ಆದರೆ, ಅದೃಷ್ಟ ಖಂಡಿತವಾಗಿಯೂ ಒಲಿಯು ತ್ತದೆ’ ಎಂದು ಆಂಜನೇಯ ಹೇಳಿದರೆ, ‘ಯುವ ಕರಿಗೆ ಅವಕಾಶ ಇದ್ದೇ ಇದೆ. ಆದರೆ, ಪ್ರಸಕ್ತ ರಾಜಕಾರಣಕ್ಕೆ ತಕ್ಕಂತೆ ಹೊಂದಾಣಿಕೆ ಮನೋ ಭಾವವನ್ನು ಮಹಿಮಾ ಬೆಳೆಸಿಕೊಳ್ಳಬೇಕು’ ಎಂದು ಮುಖ್ಯಮಂತ್ರಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.