ಕೃಷ್ಣರಾಜಪುರ: `ಆಧುನಿಕತೆ ಬೆಳೆದಂತೆಲ್ಲಾ ಮನುಷ್ಯ ಹಕ್ಕಿಯಾಗಿ ಹಾರುವುದನ್ನು, ಮೀನಿನಂತೆ ಈಜುವುದನ್ನೂ ಕಲಿತಿದ್ದರೂ ಮನುಷ್ಯನಾಗಿ ಬದುಕುವುದನ್ನು ಮಾತ್ರ ಕಲಿತಿಲ್ಲ. ಪ್ರಾಮಾಣಿಕ ಬದುಕು ಕಲಿಸಲು ಧ್ಯಾನ ಮಹತ್ವದ ಪಾತ್ರ ವಹಿಸುತ್ತದೆ~ ಎಂದು ಶ್ರೀ ಶ್ರೀ ರವಿಶಂಕರ್ ಗುರೂಜಿ ಹೇಳಿದರು.
ಹೊರಮಾವು ವರ್ತುಲ ರಸ್ತೆ ಬಳಿ ಸೋಮವಾರ ಆಯೋಜಿಸಿದ್ದ `ಮಹಾ ಸತ್ಸಂಗ~ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, `ಇಂದಿನ ಒತ್ತಡದಿಂದ ಮನಸ್ಸಿನ ನೆಮ್ಮದಿಗೆ ಧಕ್ಕೆಯಾಗುತ್ತಿದೆ. ಒತ್ತಡದ ಬದುಕಿಗೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಕೂಡ ಇದೆ. ಆದರೆ, ಧ್ಯಾನ ಮಾನಸಿಕ ಬೆಳವಣಿಗೆಯಲ್ಲಿ ಪರಿಣಾಮಕಾರಿ ಪಾತ್ರ ವಹಿಸುತ್ತದೆ~ ಎಂದು ಪ್ರತಿಪಾದಿಸಿದರು.
`ಮನಸ್ಸನ್ನು ನಿಗ್ರಹಿಸುವುದು ದುಸ್ಸಾಹಸದ ಕೆಲಸ. ಆದರೆ, ಧ್ಯಾನಕ್ಕೆ ಮಾತ್ರ ಮನಸ್ಸನ್ನು ನಿಗ್ರಹಿಸುವ ಶಕ್ತಿಯಿದೆ. ಅದರಿಂದ ಆರೋಗ್ಯವೂ ಸುಧಾರಿಸುತ್ತದೆ ಎಂದು ಅವರು ಉದಹರಿಸಿದರು. `ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಣ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಜನ ನಂಬಿದ್ದಾರೆ. ಆದರೆ ಹಣದಿಂದಲೇ ಎಲ್ಲ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ ಎಂಬುದನ್ನೂ ಮರೆಯಬಾರದು ಎಂದರು.