ಬೆಂಗಳೂರು: ಪಾಲಿಕೆಯ ವಾರ್ಡ್ ಸಮಿತಿ ಸದಸ್ಯರಿಗಿರುವ ನಿರಾಕರಣ (ವಿಟೊ) ಅಧಿಕಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ರಿಟ್ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗಳಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
ಈ ಕುರಿತ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠವು ಸೋಮವಾರ ವಿಚಾರಣೆ ನಡೆಸಿತು. ‘ಯಾವುದೇ ಪಾಲಿಕೆಗಳಲ್ಲಿ ಜನಪ್ರತಿನಿಧಿಗಳ ತೀರ್ಮಾನವೇ ಅಂತಿಮವಾಗಿರಬೇಕು.
ಆದರೆ ರಾಜ್ಯ ಮಹಾನಗರ ಪಾಲಿಕೆ ಕಾಯ್ದೆ–1976ರ ಉಪ ಕಲಂ 13 ಎಚ್ (7)ರ ಅನುಸಾರ ವಾರ್ಡ್ ಸಮಿತಿ ಅಧ್ಯಕ್ಷರಿಗೆ ಕೊಡಮಾಡಲಾಗಿರುವ ನಿರಾಕರಣ ಅಧಿಕಾರ ಸಂವಿಧಾನ ಬಾಹಿರ’ ಎಂಬುದು ಅರ್ಜಿದಾರರ ದೂರು.