ಪುತ್ತೂರು: ವಿವಿಧ ಧರ್ಮಕ್ಕೆ ಸೇರಿದ ವಿದ್ಯಾರ್ಥಿಗಳು ಮಂಗಳವಾರ ಹೋಟೆಲೊಂದರಲ್ಲಿ ಜನ್ಮದಿನ ಆಚರಿಸುತ್ತಿದ್ದ ವೇಳೆ ಅಲ್ಲಿಗೆ ತೆರಳಿ ಶಾಂತಿಭಂಗಕ್ಕೆ ಯತ್ನಿಸಿದ ಆರೋಪದಲ್ಲಿ ಬಜರಂಗದಳದ ಜಿಲ್ಲಾ ಸಹ ಸಂಚಾಲಕ ಶ್ರೀಧರ್ ತೆಂಕಿಲ ವಿರುದ್ದ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿವೇಕಾನಂದ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಮಂಗಳವಾರ ಮಧ್ಯಾಹ್ನ ಇಲ್ಲಿನ ಬೊಳುವಾರು ಸಮೀಪವಿರುವ ಹೋಟೆಲ್ ಒಂದರಲ್ಲಿ ಜನ್ಮದಿನದ ಔತಣದಲ್ಲಿ ತೊಡಗಿದ್ದರು.
ಈ ಬಗ್ಗೆ ಮಾಹಿತಿ ಪಡೆದು ಹೋಟೆಲ್ ಪ್ರವೇಶಿಸಿದ ಶ್ರೀಧರ್ ತೆಂಕಿಲ, ಪೊಲೀಸರಿಗೆ ದೂರವಾಣಿ ಕರೆಮಾಡಿ ವಿದ್ಯಾರ್ಥಿಗಳು ಅಸಭ್ಯ ವರ್ತನೆಯಲ್ಲಿ ತೊಡಗಿದ್ದಾರೆ ಎಂದು ಮಾಹಿತಿ ನೀಡಿದ್ದರು.
ಸ್ಥಳಕ್ಕೆ ತೆರಳಿದ ಪುತ್ತೂರು ನಗರ ಠಾಣೆಯ ಪೊಲೀಸರು ಹೋಟೆಲ್ನಲ್ಲಿ ಪರಿಶೀಲನೆ ನಡೆಸಿದರು. ಅಲ್ಲಿ ಜನ್ಮದಿನದ ಔತಣಕೂಟ ನಡೆಯುತ್ತಿತ್ತು. ತಕ್ಷಣ ಶ್ರೀಧರ್ ತೆಂಕಿಲ ಅವರನ್ನು ವಶಕ್ಕೆ ಪಡೆದ ಪೊಲೀಸರು, ಸಾರ್ವಜನಿಕ ಶಾಂತಿಭಂಗಕ್ಕೆ ಯತ್ನಿಸಿದ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡರು.