ಯಲಹಂಕ: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) ರಸ್ತೆಯ ಎತ್ತರಿಸಿದ ಮಾರ್ಗದಲ್ಲಿ ಶನಿವಾರ ಜೀಪು ಮಗುಚಿ ಬಿದ್ದಿದ್ದರಿಂದ ಒಂದು ತಾಸಿಗೂ ಹೆಚ್ಚು ಕಾಲ ಸಂಚಾರ ದಟ್ಟಣೆ ಉಂಟಾಯಿತು.
ಯಲಹಂಕ ಸಮೀಪದ ಮಾರುತಿನಗರ ನಿವಾಸಿ ವೆಂಕಟರೆಡ್ಡಿ (34) ಅವರು ಬೆಳಿಗ್ಗೆ 11.30ರ ಸುಮಾರಿಗೆ ಜೀಪಿನಲ್ಲಿ ನಗರಕ್ಕೆ ತೆರಳುತ್ತಿದ್ದರು. ಎತ್ತರಿಸಿದ ಮಾರ್ಗದಲ್ಲಿ ಸಾಗುವಾಗ ನಿಯಂತ್ರಣ ಕಳೆದುಕೊಂಡ ಜೀಪು, ಮಗುಚಿ ಬಿದ್ದಿತು.
ಆಗ ಇತರೆ ವಾಹನಗಳ ಸವಾರರು, ವೆಂಕಟರೆಡ್ಡಿ ಅವರನ್ನು ಜೀಪಿನಿಂದ ಹೊರಗೆ ಎಳೆದರು. ಘಟನೆಯಲ್ಲಿ ವಾಹ ನದ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಅದೃಷ್ಟವಶಾತ್ ವೆಂಕಟರೆಡ್ಡಿ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾ ಪಾಯದಿಂದ ಪಾರಾಗಿದ್ದಾರೆ.
ವಾಹನ ದಟ್ಟಣೆ ಹೆಚ್ಚಿರುವ ಸಮಯದಲ್ಲೇ (ಪೀಕ್ ಅವರ್) ಅಪಘಾತ ಸಂಭವಿಸಿದ್ದರಿಂದ ಹಾಗೂ ಘಟನಾ ಸ್ಥಳದಲ್ಲಿ ಹೆಚ್ಚಿನ ಜನ ಜಮಾಯಿಸಿದ್ದರಿಂದ ಸಂಚಾರ ಅಸ್ತವ್ಯಸ್ತ ವಾಯಿತು. ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವಾಹನಗಳು ಯಲಹಂಕದಿಂದ ಹೆಬ್ಬಾಳದವರೆಗೆ ಸಾಲುಗಟ್ಟಿ ನಿಲ್ಲಬೇಕಾಯಿತು.
‘ವಿಮಾನ ಪ್ರಯಾಣಿಕರನ್ನು ಸೂಕ್ತ ಸಮಯಕ್ಕೆ ಕೆಐಎಎಲ್ ತಲುಪಿಸುವಂತೆ ಮಾಡುವುದು ನಮ್ಮ ಮೊದಲ ಉದ್ದೇಶವಾಗಿತ್ತು. ಹೀಗಾಗಿ ವಿಷಯ ತಿಳಿದ ಕೂಡಲೇ ಹೆಚ್ಚಿನ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಲಾಯಿತು. ಮಗುಚಿ ಬಿದ್ದಿದ್ದ ಜೀಪನ್ನು ಕ್ರೇನ್ ಮೂಲಕ ತೆರವುಗೊಳಿಸಿದ ಸಿಬ್ಬಂದಿ, ಜನರನ್ನು ಚದುರಿಸಿದರು. ಅದೇ ರೀತಿ ನಗರದ ಕಡೆಗೆ ಹೊರಟಿದ್ದ ವಾಹನಗಳನ್ನು ಜಕ್ಕೂರು ಮೇಲ್ಸೇತುವೆ ಕೆಳಭಾಗದ ಸರ್ವಿಸ್ ರಸ್ತೆಯಿಂದ ಕಳುಹಿಸಲಾಯಿತು. ಹೀಗಾಗಿ ಒಂದು ತಾಸಿನೊಳಗೆ ಸಂಚಾರ ಸಹಜ ಸ್ಥಿತಿಗೆ ಮರಳಿತು’ ಎಂದು ಹಿರಿಯ ಅಧಿಕಾರಿಗಳು ಹೇಳಿದರು.