ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಪಾಯದ ಮಣ್ಣು ಕುಸಿದು ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಇನ್ಫೆಂಟ್ರಿ ರಸ್ತೆಯಲ್ಲಿ ಸೋಮ ವಾರ ಸಂಭವಿಸಿದೆ.
ಬಿಹಾರ ಮೂಲದ ಮುನ್ನಾ ಕುಮಾರ್ (21) ಮೃತಪಟ್ಟವರು. ಘಟನೆಯಲ್ಲಿ ರಾಜ್ಕುಮಾರ್ ಸಿಂಗ್ ಮತ್ತು ಸಜಿದ್ ಎಂಬ ಕಾರ್ಮಿಕರು ಗಾಯಗೊಂಡಿದ್ದಾರೆ.
ಘಟನಾ ಸ್ಥಳದಲ್ಲಿ ಅಪಾರ್ಟ್ ಮೆಂಟ್ ನಿರ್ಮಾಣವಾಗುತ್ತಿದ್ದು, ವಾಹನ ನಿಲುಗಡೆ ಪ್ರದೇಶಕ್ಕಾಗಿ ಆ ಜಾಗದಲ್ಲಿ ಸುಮಾರು 20 ಅಡಿ ಆಳದ ಗುಂಡಿ ತೆಗೆಯಲಾಗಿದೆ. ಮುನ್ನಾಕುಮಾರ್ ಮತ್ತು ಇತರ ಕಾರ್ಮಿಕರು ಗುಂಡಿಯೊಳಗೆ ಮಧ್ಯಾಹ್ನ ಪಾಯದ ಕೆಲಸ ಮಾಡುತ್ತಿದ್ದರು. ಈ ವೇಳೆ ಗುಂಡಿಯ ಒಂದು ಪಾರ್ಶ್ವದಲ್ಲಿ ಮಣ್ಣು ಕುಸಿದು ಮುನ್ನಾಕುಮಾರ್, ರಾಜ್ಕುಮಾರ್ ಸಿಂಗ್ ಮತ್ತು ಸಾಜಿದ್ ಮೇಲೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಇತರ ಕಾರ್ಮಿಕರು ಮಣ್ಣನ್ನು ತೆರವುಗೊಳಿಸಿ ಆ ಮೂವ ರನ್ನು ರಕ್ಷಿಸಲು ಯತ್ನಿಸಿದ್ದಾರೆ. ಆದರೆ, ಆ ವೇಳೆಗಾಗಲೇ ಮುನ್ನಾಕುಮಾರ್ ಉಸಿರುಗಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಗಾಯಾಳುಗಳನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾ ಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ನಿವೇಶನದ ಮಾಲೀಕ ಮತ್ತು ಕಟ್ಟಡದ ಗುತ್ತಿಗೆದಾರನ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.