ಬೆಂಗಳೂರು: ‘ಆ ದಿನ ಶಿವಮೊಗ್ಗದಲ್ಲಿದ್ದೆ. ಏಕೋ ತುಂಬಾ ಬೇಸರವಾಗಿತ್ತು. ಸಂಗಾತಿಯೂ ಇರಲಿಲ್ಲ. ಒಬ್ಬಂಟಿಯಾಗಿ ಕೋಣೆಯಲ್ಲಿ ಸುಮ್ಮನೇ ಕುಳಿತಿದ್ದೆ. ಏನು ಮಾಡಬೇಕೆಂದು ತೋಚದಾಗಿತ್ತು. ಮೇಲೆದ್ದು ಸುಮ್ಮನೇ ವಾಯುವಿಹಾರಕ್ಕೆ ಹೊರಟೆ. ಆ ಕ್ಷಣದಲ್ಲಿ ಹುಟ್ಟಿದ್ದು ಈ ಗೀತೆ’
–‘ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ; ನಿನ್ನ ಜೊತೆ ಇಲ್ಲದೆ, ಮಾತಿಲ್ಲದೆ, ಮನ ವಿಭ್ರಾಂತ’ ಎಂಬ ಕವಿತೆಯನ್ನು ರಚಿಸಲು ಸ್ಫೂರ್ತಿಯಾದ ಸನ್ನಿವೇಶವನ್ನು ಹೀಗೆ ಬಿಡಿಸಿಟ್ಟಿದ್ದು ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್.
ಭಾನುವಾರ ಕರ್ನಾಟಕ ಸುಗಮ ಸಂಗೀತ ಪರಿಷತ್ ಆಯೋಜಿಸಿದ್ದ ‘ಕವಿಯ ನೋಡಿ ಕವಿತೆ ಕೇಳಿ’ ಸರಣಿಯಲ್ಲಿ ‘ಮೇಸ್ಟ್ರು’ ಹಲವು ನೆನಪುಗಳನ್ನು ಮೆಲುಕು ಹಾಕಿದರು. ‘ಮತ್ತದೇ ಬೇಸರ...’ ಗೀತೆಯನ್ನು ಶಮಿತಾ ಮಲ್ನಾಡ್ ಸುಶ್ರಾವ್ಯವಾಗಿ ಹಾಡಿದರು.
ಈ ಕಾರ್ಯಕ್ರಮಕ್ಕೆ ವೇದಿಕೆಯಾಗಿದ್ದು ಜಯನಗರ ಏಳನೇ ಹಂತದಲ್ಲಿರುವ ಬೆಂಗಳೂರು ಇಂಟರ್ನ್ಯಾಷನಲ್ ಅಕಾಡೆಮಿಯ ಸಭಾಂಗಣ. ತಾವು ಬರೆದ ಕವಿತೆಗಳ ಹುಟ್ಟಿಗೆ ಕಾರಣವೇನು? ಯಾವ ಸನ್ನಿವೇಶದಲ್ಲಿ ಹೊರಹೊಮ್ಮಿದವು? ಅದರ ಹಿಂದಿನ ಸ್ಫೂರ್ತಿಯೇನು ಎಂಬುದನ್ನು ಹಾಸ್ಯಭರಿತ ಮಾತುಗಳೊಂದಿಗೆ ಸೊಗಸಾಗಿ ನಿಸಾರ್ ಬಿಚ್ಚಿಟ್ಟರು.
ನಿಸಾರ್ ಕವಿಯ ಮಾತುಗಳ ಜತೆಗೆ ಅವರು ರಚಿಸಿರುವ 12 ಕವಿತೆಗಳನ್ನು ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಹೆಸರಾಂತ ಗಾಯಕರು ಪ್ರಸ್ತುತಪಡಿಸಿದರು. ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ, ಕವಿ ಬಿ.ಆರ್.ಲಕ್ಷ್ಮಣ ರಾವ್ ಸೇರಿದಂತೆ ಅಪಾರ ಸಾಹಿತ್ಯಾಭಿಮಾನಿಗಳು ಈ ವಿನೂತನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
‘ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ’ ಕವಿತೆ ಹುಟ್ಟಲು ಕಾರಣವಾದ ಸನ್ನಿವೇಶವನ್ನು ಮನೋಜ್ಞವಾಗಿ ವಿವರಿಸಿದರು. ‘1968ರಲ್ಲಿ ನಾನು ಶಿವಮೊಗ್ಗದಲ್ಲಿ ಅಧ್ಯಾಪಕನಾಗಿದ್ದೆ. ಕನ್ನಡ ರಾಜ್ಯೋತ್ಸವ ಆಚರಣೆಗೆ ಸಂಬಂಧಿಸಿ ಒಂದು ಕವಿತೆ ಬರೆದುಕೊಡುವಂತೆ ಆಕಾಶವಾಣಿಯಿಂದ ಪತ್ರ ಬಂದಿತ್ತು. ಬರೆದುಕೊಡುತ್ತೇನೆ ಎಂದು ಹೇಳಿ ಸುಮ್ಮನಾಗಿದ್ದೆ. ರಜೆ ಇದ್ದ ಕಾರಣ ಬೆಂಗಳೂರಿಗೆ ಬಂದೆ. ಜಯನಗರದಲ್ಲಿ ಉಳಿದುಕೊಂಡಿದ್ದೆ. ಆಕಾಶವಾಣಿ ಕೇಂದ್ರದವರು ಹೇಗೋ ಮತ್ತೆ ನನ್ನ ಬೆನ್ನು ಹತ್ತಿದರು. ಈ ರೀತಿ ಅನ್ಯಾಯ ಮಾಡಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದರು. ಮಾರನೇ ದಿನವೇ ಕೊಡಬೇಕು ಎಂದು ತಾಕೀತು ಮಾಡಿದರು’
‘ಬೇಸರದಿಂದ ತಕ್ಷಣವೇ ಸಿಗರೇಟು ಸೇದುತ್ತಾ ಯೋಚಿಸಲಾರಂಭಿಸಿದೆ. ಮನೆಯ ಮಹಡಿಯಲ್ಲಿ ಓಡಾಡಿದೆ. ಆಗ ಮಲೆನಾಡಿನ ಸೊಬಗು ಕಣ್ಮುಂದೆ ಹಾದುಹೋಯಿತು. ಕಾಲೇಜಿಗೆ ಹೋಗುವಾಗ ತುಂಗಾ ನದಿಯನ್ನು ದಾಟಿಕೊಂಡು ಹೋಗ-ಬೇಕಿತ್ತು. ಆ ಪರಿಸರ ನನ್ನನ್ನು ತುಂಬಾ ಆಕರ್ಷಿಸಿತ್ತು. ಪ್ರಕೃತಿಯೇ ನನ್ನ ಗುರು. ನನ್ನ ಸ್ಫೂರ್ತಿ. ಅಂದು ರಾತ್ರಿಯೇ ನಾನು ಆ ಕವಿತೆ ಬರೆದು ಕಳುಹಿಸಿಕೊಟ್ಟೆ. ಅದನ್ನು ಮೊದಲು ಕೇಳಿದಾಗ ಖುಷಿಯಾಗಲಿಲ್ಲ. ಆದರೆ, ಇಷ್ಟು ಖ್ಯಾತಿ ತಂದುಕೊಡಬಹುದು ಎಂಬ ಊಹೆಯೂ ಇರಲಿಲ್ಲ’ ಎಂದರು.
‘ಒಂದು ದಿನ ತಮಿಳು ಕುಟುಂಬವೊಂದರ ಮನೆಯಿಂದ ‘ನಿತ್ಯೋತ್ಸವ ಅಯ್ಯಪ್ಪ ನಿತ್ಯೋತ್ಸವ’ ಎಂಬ ಹಾಡು ಕೇಳಿಬರುತಿತ್ತು. ಅಲ್ಲಿಗೆ ಹೋಗಿ ವಿಚಾರಿಸಿದಾಗ ನನ್ನ ಗೀತೆಯನ್ನು ಅವರ ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಿದ್ದರು. ಅಲ್ಲಿದ್ದ ಒಬ್ಬ ಹುಡುಗ, ಶಬರಿಮಲೆಯಲ್ಲೂ ಈ ಹಾಡನ್ನು ಹೇಳುತ್ತಾರೆ ಸರ್. ಮೂಲ ಹಾಡನ್ನು ಯಾರೊ ತುಂಬಾ ಚೆನ್ನಾಗಿ ಬರೆದಿದ್ದಾನೆ ಎಂದ. ಬರ್ತೀನಪ್ಪಾ ಎಂದು ಅಲ್ಲಿಂದ ಹೊರಟೆ’ ಎಂದಾಗ ಸಭೆಯಲ್ಲಿ ನಗುವಿನ ಅಲೆ. ‘ಕುರಿಗಳು ಸಾರ್ ಕುರಿಗಳು’ ಗೀತೆಯನ್ನು ಪಂಚಮ್ ಹಳಿಬಂಡಿ ಸೊಗಸಾಗಿ ಪ್ರಸ್ತುತಪಡಿಸಿದರು.
‘ಚೀನಿಯರ ಆಕ್ರಮಣದ ಸಂದರ್ಭದಲ್ಲಿ ನಮ್ಮನ್ನು ಆಳುವ ಪ್ರಭುಗಳ ನಿಲುವನ್ನು ಖಂಡಿಸಿ ಬರೆದ ಕವಿತೆಯಿದು. ಅವರ ವರ್ತನೆಯಿಂದ ತುಂಬಾ ಬೇಸರವಾಗಿತ್ತು. ಅದೇ ಯೋಚನೆಯಲ್ಲಿ ಕಾರ್ಯಕ್ರಮಕ್ಕೆ ಹೋಗುತ್ತಿದ್ದೆ. ಕುರಿ ಹಿಂಡೊಂದು ದಾರಿಯಲ್ಲಿ ಹಾದುಹೋಯಿತು. ಆಗ ಹುಟ್ಟಿದ್ದೇ ಈ ಗೀತೆ’ ಎಂದು ನೆನಪಿಸಿಕೊಂಡರು. ಪರಿಷತ್ ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ, ಕಿಕ್ಕೇರಿ ಕೃಷ್ಣಮೂರ್ತಿ, ಸಂಗೀತಾ ಕಟ್ಟಿ, ನಗರ ಶ್ರೀನಿವಾಸ ಉಡುಪ, ಅರ್ಚನಾ ಉಡುಪ, ಪಿ.ಮಂಗಳಾ ರವಿ, ಎಂ.ಕೆ.ಜಯಶ್ರೀ, ಸೀಮಾ ರಾಯ್ಕರ್ ಹಾಗೂ ಸ್ಪರ್ಶ ಗೀತೆಗಳನ್ನು ಹಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.