ಬೆಂಗಳೂರು: ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಸಮಾನತೆಗಾಗಿ ಮತ್ತು ಮೀಸಲಾತಿಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್. ಕಾಂತರಾಜು ತಿಳಿಸಿದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ –2015 ಕುರಿತು ಮಾಹಿತಿ ನೀಡಲು ಬುಧವಾರ ಇಲ್ಲಿ ಆಯೋಜಿಸಲಾಗಿದ್ದ ಬೆಂಗಳೂರು ನಗರ ಜಿಲ್ಲಾ ಜನಪ್ರತಿ ನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಜಾತಿ ಜತೆಗೆ ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಸ್ಥಿತಿಗತಿಯ ವೈಜ್ಞಾನಿಕ ಸಮೀಕ್ಷೆ ನಡೆಸದಿದ್ದರೆ ಸಂವಿಧಾನದ ಆಶಯ ಜಾರಿ ಸರಿಯಾದ ದಿಕ್ಕಿನಲ್ಲಿ ಸಾಗಲು ಸಾಧ್ಯವಿಲ್ಲ. ಸಂವಿಧಾನವು ಜಾತಿ ರಹಿತ ಸಮಾಜವನ್ನು ಪ್ರತಿಪಾದಿಸಿದ್ದರೂ ಜಾತಿ ಶತ್ರು
ವನ್ನು ಹೊಡೆದೋಡಿಸಲು ಪೂರಕ ಕ್ರಮ ಅಗತ್ಯ ಎಂದು ಅಭಿಪ್ರಾಯಪಟ್ಟರು.
‘ಎಲ್ಲರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿ ಟ್ಟುಕೊಂಡು ಸಂವಿಧಾನ ಹಾಗೂ ಸುಪ್ರೀಂ ಕೋರ್ಟ್ ಆಶಯದಂತೆ ವೈಜ್ಞಾನಿಕವಾಗಿ ಸಮೀಕ್ಷೆ
ಶಾಸಕರು, ಸಂಸದರಿಲ್ಲದ ಸಭೆ |
---|
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತು ಬುಧವಾರ ಆಯೋಜಿಸಲಾಗಿದ್ದ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಜನಪ್ರತಿನಿಧಿಗಳ ಸಭೆಯಲ್ಲಿ ಒಬ್ಬರೂ ಶಾಸಕರು ಇರಲಿಲ್ಲ. ಸಂಸದರೂ ಇರಲಿಲ್ಲ. ಜಾತಿವಾರು ಜನಗಣತಿ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಸ್ಥಳೀಯ ಸಂಸದರು, ಶಾಸಕರು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಪುರಸಭೆ ಅಧ್ಯಕ್ಷರು ಹಾಗೂ ಸದಸ್ಯರನ್ನು ಆಹ್ವಾನಿಸಲಾಗಿತ್ತು. ‘ವಿಧಾನ ಮಂಡಲ ಅಧಿವೇಶನ ಒಂದು ದಿನ ವಿಸ್ತರಣೆ ಆಗಿದ್ದರಿಂದ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಬಂದಿಲ್ಲ’ ಎಂದು ಸಂಘಟಕರು ಸ್ಪಷ್ಟನೆ ನೀಡಿದರು. ಸ್ಥಳೀಯ ಸಂಸ್ಥೆಗಳ ಸದಸ್ಯರ ಕೊರತೆಯೂ ಎದ್ದು ಕಾಣುತಿತ್ತು. |
ಹಮ್ಮಿಕೊಳ್ಳಲಾಗಿದೆ. ಜಾತಿ ಸಮಾಜ ಗಟ್ಟಿ ಮಾಡುವುದು ಇದರ ಉದ್ದೇಶವಲ್ಲ. ಬದಲಾಗಿ ಜಾತಿ ನಡುವಣ ಕಂದಕ ತೊಡೆದು ಹಾಕಬೇಕು. ಸಮಾನತೆ ಲಭಿಸಿದಾಗ ಮಾತ್ರ ಆ ಕಂದಕ ಹೋಗುತ್ತದೆ’ ಎಂದರು.
ಈ ಸಮೀಕ್ಷೆಯಲ್ಲಿ ಧರ್ಮ, ಜಾತಿ, ಉಪಜಾತಿ, ಮಾತೃಭಾಷೆ, ಕಸುಬು, ಕೃಷಿ ಭೂಮಿ, ಉದ್ಯೋಗ, ವಾಸವಿರುವ ಮನೆ ಸ್ಥಿತಿ, ಸರ್ಕಾರದಿಂದ ಪಡೆದ ಸೌಲಭ್ಯ ಸೇರಿ 55 ಪ್ರಶ್ನಾವಳಿಗಳ ಮೂಲಕ ಮಾಹಿತಿ ಸಂಗ್ರಹಿಸಲಾಗುವುದು. ಶೇ 100 ರಷ್ಟು ಜನರ ಗಣತಿ ಆಗಬೇಕು. ಯಾವುದೇ ಗಣತಿ ಬ್ಲಾಕ್ನಲ್ಲಿ ಸಮೀಕ್ಷೆಯ ಕಾರ್ಯ ಬಿಟ್ಟುಹೋಗಬಾರದು ಎಂದು ಕೋರಿದರು.
ಪ್ರಚಾರ ಶುರು: ಸಮೀಕ್ಷೆಯ ಯಶಸ್ವಿಗಾಗಿ ಬುಧವಾರ (ಏ.1) ಪ್ರಚಾರ ಆರಂಭಿಸಲಾಗಿದೆ. ಇದಕ್ಕಾಗಿ ಸರ್ಕಾರ ₨ 1.3 ಕೋಟಿ ಮೀಸಲಿಟ್ಟಿದೆ ಎಂದು ಹೇಳಿದರು.
ಅಂಕಿ ಅಂಶವಿಲ್ಲ: ಸಭೆ ಉದ್ಘಾಟಿಸಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ‘ಜಾತಿ ಬಗ್ಗೆ ಸರ್ಕಾರದ ಬಳಿ ಸ್ಪಷ್ಟ ಅಂಕಿ ಅಂಶಗಳು ಇಲ್ಲ. ಇದರಿಂದಾಗಿ ಮೀಸಲಾತಿ ಒದಗಿ ಸುವಲ್ಲಿ ಸಮಸ್ಯೆಯಾಗುತ್ತಿದೆ. ವಿವಾದ ಸೃಷ್ಟಿಯಾಗುತ್ತಿದೆ. ಸ್ಪಷ್ಟ ಮಾಹಿತಿ ಪಡೆ ಯಲು ಈ ಹೆಜ್ಜೆ ಇಟ್ಟಿದ್ದೇವೆ’ ಎಂದರು.
‘ಈಗಿರುವ ಅನ್ಯಾಯ ಸರಿಪಡಿಸಿ ಸಮರ್ಪಕ ಸೌಲಭ್ಯ ಒದಗಿಸಲು ಈ ಸಮೀಕ್ಷೆ ನೆರವಾಗಲಿದೆ. ಸಾಮಾಜಿಕ ನ್ಯಾಯ ಅನುಷ್ಠಾನ ಮಾಡಲು ಸಾಧ್ಯವಾಗುತ್ತದೆ’ ಎಂಬ ಆಶಯ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.