ಬೆಂಗಳೂರು: ‘ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಮುಖವಾಡ ಧರಿಸಿ ಮತಯಾಚಿಸುತ್ತಿರುವ ಬಿಜೆಪಿ ನಾಯಕರನ್ನು ದೂರವಿಡಿ’ ಎಂದು ಕೆಪಿಸಿಸಿ ವಕ್ತಾರೆ ತಾರಾದೇವಿ ಸಿದ್ಧಾರ್ಥ ಮನವಿ ಮಾಡಿದರು. ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಮುಖವಾಡದ ಹಿಂದೆ ಲಂಚಕೋರರು, ಅತ್ಯಾಚಾರಿಗಳು ಹಾಗೂ ಭ್ರಷ್ಟರಿದ್ದಾರೆ. ಅವರನ್ನು ಬೆಂಬಲಿಸಬೇಡಿ ಎಂದರು.
ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸಿದ ಐದು ವರ್ಷದ ಅವಧಿಯನ್ನು ಜನ ಕೆಟ್ಟ ಕನಸು ಎಂದು ಭಾವಿಸಿದ್ದಾರೆ. ಗಣಿ ಲೂಟಿ, ರೆಸಾರ್ಟ್ ರಾಜಕಾರಣ, ಆಂತರಿಕ ಜಗಳ, ಭೂ ಕಬಳಿಕೆ ಸೇರಿದಂತೆ ಬಹುಪಾಲು ಸಮಯವನ್ನು ಭ್ರಷ್ಟಾಚಾರದಲ್ಲೇ ಕಳೆದ ಬಿಜೆಪಿ ಮುಖಂಡರಿಗೆ ಜನರ ಮುಂದೆ ಹೋಗಿ ಮತಯಾಚಿಸಲು ನೈತಿಕ ಹಕ್ಕಿಲ್ಲ ಎಂದು ದೂರಿದರು.
ಮೋದಿ ಅಲೆ ಎಂದು ಹೇಳುವುದು ಕೇವಲ ಪ್ರಚಾರದ ಗಿಮಿಕ್. ಮೋದಿ ‘ಕಾಂಗ್ರೆಸ್ ಮುಕ್ತ ಭಾರತ’ ಎಂಬ ಘೋಷ ವಾಕ್ಯದೊಂದಿಗೆ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ರಾಜ್ಯದ ಯಾವ ಭಾಗದಲ್ಲೂ ಮೋದಿ ಅಲೆ ಇಲ್ಲ. ದೇಶದಲ್ಲಿ ಕೇವಲ ಕಾಂಗ್ರೆಸ್ ಅಲೆ ಇದೆ. ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಕಾಂಗ್ರೆಸ್ ಹೆಚ್ಚು ಸ್ಥಾನಗಳಿಸಿ, ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮೋದಿ ಹೆಸರಿನಲ್ಲಿ ರಾಜ್ಯದಲ್ಲಿ ಮತಯಾಚಿಸುತ್ತಿರುವ ಬಿಜೆಪಿ, ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ. ಅದು ಅವರ ಭ್ರಮೆ ಅಷ್ಟೆ ಎಂದು ವ್ಯಂಗ್ಯವಾಡಿದರು. ಸುತ್ತಲೂ ಭ್ರಷ್ಟಾಚಾರಿಗಳನ್ನೇ ಇಟ್ಟುಕೊಂಡಿರುವ ಮೋದಿ ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಈ ಬಾರಿಯ ಚುನಾವಣೆಯಲ್ಲಿ ಜನ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.