ಬೆಂಗಳೂರು: ನಗರದ ಯಶವಂತಪುರದ ಬಳಿಯಲ್ಲಿ `ನಮ್ಮ ಮೆಟ್ರೊ~ ನಿಲ್ದಾಣದ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಸರ್ಕಾರಿ ಸಾಬೂನು ಕಾರ್ಖಾನೆ ವೃತ್ತದಿಂದ ಹಾದು ಹೋಗುವ ವಾಹನಗಳ ಮಾರ್ಗವನ್ನು ಬದಲಿಸಲಾಗಿದೆ.
ಡಾ. ರಾಜ್ಕುಮಾರ್ ರಸ್ತೆ ಮತ್ತು ಪಶ್ಚಿಮ ಕಾರ್ಡ್ ರಸ್ತೆಗಳಿಂದ ಸರ್ಕಾರಿ ಸಾಬೂನು ಕಾರ್ಖಾನೆ ವೃತ್ತದ ಮೂಲಕ ತುಮಕೂರು ರಸ್ತೆ ಮತ್ತು ಯಶವಂತಪುರ ವೃತ್ತದ ಕಡೆಗೆ ಹೋಗುವ ಎಲ್ಲಾ ವಾಹನಗಳ ಸಂಚಾರವನ್ನು ಸರ್ಕಾರಿ ಸಾಬೂನು ಕಾರ್ಖಾನೆ ವೃತ್ತದಲ್ಲಿ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಡಾ.ರಾಜ್ಕುಮಾರ್ ರಸ್ತೆಯಿಂದ ತುಮಕೂರು ಮತ್ತು ಯಶವಂತಪುರದ ಕಡೆಗೆ ಹೋಗುವ ಎಲ್ಲಾ ವಾಹನಗಳು ಸರ್ಕಾರಿ ಸಾಬೂನು ಕಾರ್ಖಾನೆ ವೃತ್ತದಲ್ಲಿ ಎಡ ತಿರುವು ಪಡೆದು ಪಶ್ಚಿಮ ಕಾರ್ಡ್ ರಸ್ತೆಯ ಮೂಲಕ ರವಿಂದು ಟೊಯೋಟಾ ಬಳಿ ಬಲ ತಿರುವು ಪಡೆದು ಸರ್ಕಾರಿ ಸಾಬೂನು ಕಾರ್ಖಾನೆಯ ಹಿಂಭಾಗದ (ಯಶವಂತಪುರ ಸಬರ್ಬ್) ರಸ್ತೆಯಲ್ಲಿ ಸಾಗಿ ಓರಿಯನ್ ಡಿಸ್ಟಿಲರಿ ಜಂಕ್ಷನ್ನಲ್ಲಿ ಬಲಕ್ಕೆ ತಿರುಗಿ ಮಾರಪ್ಪನಪಾಳ್ಯ ಮುಖ್ಯ ರಸ್ತೆಯ ಮೂಲಕ ತುಮಕೂರು ರಸ್ತೆ ಸೇರಬಹುದು.
ಯಶವಂತಪುರದ ಕಡೆ ಹೋಗುವ ಎಲ್ಲಾ ವಾಹನಗಳು ಮಾರಪ್ಪನಪಾಳ್ಯ ಒಂದು ಮತ್ತು ಎರಡನೇ ಅಡ್ಡರಸ್ತೆಯಲ್ಲಿ ಬಲತಿರುವು ಪಡೆದು ಸರ್ವೀಸ್ ರಸ್ತೆ ಮುಖಾಂತರ ಪ್ರೇರಣಾ ಮೋಟಾರ್ಸ್ ಮುಂದೆ ಎಡಕ್ಕೆ ತಿರುಗಿ ಮಾರಪ್ಪನ ಪಾಳ್ಯದ ಬಳಿಯ `ಯು~ ತಿರುವಿನಲ್ಲಿ ಎಡ ತಿರುವು ಪಡೆದು ಯಶವಂತಪುರದ ಕಡೆಗೆ ಹೋಗಬಹುದು.
ವಾಹನಗಳ ಮಾರ್ಗ ಬದಲಾವಣೆಯು ಸರ್ಕಾರಿ ಸಾಬೂನು ಕಾರ್ಖಾನೆ ವೃತ್ತದಲ್ಲಿ `ನಮ್ಮ ಮೆಟ್ರೊ~ ನಿಲ್ದಾಣದ ಕಾಮಗಾರಿ ಪೂರ್ಣಗೊಳ್ಳುವವರೆಗೆ ಜಾರಿಯಲ್ಲಿರುತ್ತದೆ.