ಬೆಂಗಳೂರು: `ಜಾತಿ ಮತಗಳ ಹೊಟ್ಟ ತೂರಿ, ವಿಶ್ವಮಾನವನಾಗು' ಎಂದು ಕರೆಕೊಟ್ಟ ರಸಋಷಿ ಕುವೆಂಪು ಅವರ 108ನೇ ಜನ್ಮದಿನಾಚರಣೆಯನ್ನು ಜಾತಿ ಮತಗಳ ಬೇಧವಿಲ್ಲದೇ ವಿವಿಧ ಸಂಘಟನೆಗಳು ನಗರದಲ್ಲಿ ಅದ್ದೂರಿಯಾಗಿ ಆಚರಿಸಿದವು.
ಕನ್ನಡ ಸಂಘರ್ಷ ಸಮಿತಿಯ ವತಿಯಿಂದ ಲಾಲ್ಬಾಗ್ ಪಶ್ಚಿಮದ್ವಾರದಲ್ಲಿರುವ ಕುವೆಂಪು ಅವರ ಪ್ರತಿವೆುಗೆ ಸಂಸದ ಅನಂತ್ಕುಮಾರ್ ಮಾಲಾರ್ಪಣೆ ಮಾಡುವ ಮೂಲಕ ಗೌರವವನ್ನು ಸೂಚಿಸಿದರು.
ಸಾಹಿತಿ ಆರ್.ಕೆ.ನಲ್ಲೂರು ಪ್ರಸಾದ್, ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಇತರರು ಭಾಗವಹಿಸಿದ್ದರು. ನಂತರ ಕುವೆಂಪು ರಚಿತ ಕಾವ್ಯಗಳ ಪಠಣ ಹಾಗೂ ಗೀತಗಾಯನ ಕಾರ್ಯಕ್ರಮ ನಡೆಯಿತು.
`ಏನೇ ಆಗು ಮೊದಲು ನೀ ಮಾನವನಾಗು' ಎಂಬ ಕುವೆಂಪು ಅವರ ಸಂದೇಶ ಹೊತ್ತ ಫಲಕಗಳು ಸಮಾರಂಭಗಳಲ್ಲಿ ರಾರಾಜಿಸಿದವು. ಹೆಣ್ಣಿನ ಬಗ್ಗೆ ಹೆಚ್ಚುತ್ತಿರುವ ಕ್ರೌರ್ಯ ಹಾಗೂ ಕುವೆಂಪು ಅವರ ಕೃತಿಗಳಲ್ಲಿ ಹೆಣ್ಣಿಗೆ ನೀಡಿದ ಪ್ರಧಾನ ಪಾತ್ರದ ಬಗ್ಗೆ ವಿಸ್ತೃತ ಚರ್ಚೆ ನಡೆದವು.
ಕನ್ನಡ ಜನಶಕ್ತಿ ಕೇಂದ್ರವು ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿದ್ದ `ಕುವೆಂಪು ಒಂದು ಸವಿನೆನಪು' ಕಾರ್ಯಕ್ರಮದಲ್ಲಿ ಪ್ರಮುಖ ಗಾಯಕರಾದ ಡಾ. ಶಿವಮೊಗ್ಗ ಸುಬ್ಬಣ್ಣ, ವಿಜಯ್ ಹಾವನೂರು, ಯಶವಂತ ಹಳಿಬಂಡಿ, ಎಂ.ಆರ್. ಅನಂತಮೂರ್ತಿ, ಡಾ. ಶಮಿತಾ ಮಲ್ನಾಡ್, ನಾಗಚಂದ್ರಿಕಾ ಭಟ್ ಅವರು ರಸಕಾವ್ಯ ಗಾಯನವನ್ನು ಪ್ರಸ್ತುತಪಡಿಸಿದರು.
ಎಚ್ಎಎಲ್ ಕೇಂದ್ರಿಯ ಕನ್ನಡ ಸಂಘದ ಆವರಣದಲ್ಲಿ ಹಿರಿಯ ಸಾಹಿತಿ ದೇ ಜವರೇಗೌಡ ಅವರು ಕುವೆಂಪು ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಆದರ್ಶ ಸುಗಮ ಸಂಗೀತ ಎಂದಿನಂತೆ ಹಮ್ಮಿಕೊಳ್ಳುವ `ಕನ್ನಡ ಡಿಂಡಿಮ' ಕಾರ್ಯಕ್ರಮದಲ್ಲಿ ಗಾಯಕರು ಕುವೆಂಪು ಅವರ ಕವಿತೆಯನ್ನು ಸುಗಮ ಸಂಗೀತ ಮಾದರಿಯಲ್ಲಿ ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯೂ ಆಯೋಜಿಸಿದ್ದ ಸಮಾರಂಭದಲ್ಲಿ ಕುವೆಂಪು ಅವರ ಗೀತೆಗಳ ಗಾಯನ ಮತ್ತು ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಅಲ್ಲದೇ ಕನ್ನಡ ಭಾಷೆಗೆ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.