ಬೆಂಗಳೂರು: ಮೈಸೂರಿನಲ್ಲಿ ಇದೇ ತಿಂಗಳು ನಡೆಯಲಿರುವ ದಸರಾ ಮಹೋತ್ಸವ ನೋಡಲು ದೇಶ–ವಿದೇಶಗಳ ಸಾವಿರಾರು ಪ್ರವಾಸಿಗರು ಬೆಂಗಳೂರಿನ ಮೂಲಕ ಮೈಸೂರಿಗೆ ತೆರಳುತ್ತಾರೆ. ಹೀಗಾಗಿ ಪ್ರವಾಸಿಗರು ಓಡಾಡುವ ಎಲ್ಲ ರಸ್ತೆಗಳಲ್ಲಿ ಅ. 9ರಂದು ಸಂಪೂರ್ಣ ಸ್ವಚ್ಛತಾ ಕಾರ್ಯ ನಡೆಸಬೇಕು ಎಂದು ಬಿಬಿಎಂಪಿ ಆಯುಕ್ತ ಜಿ. ಕುಮಾರ್ ನಾಯಕ್ ಸುತ್ತೋಲೆ ಹೊರಡಿಸಿದ್ದಾರೆ.
ಪುರಭವನದಿಂದ ಬೆಂಗಳೂರು ವಿಶ್ವವಿದ್ಯಾಲಯದವರೆಗಿನ ರಸ್ತೆ, ಕಾಟನ್ಪೇಟೆ, ಗೂಡ್ಸ್ಶೆಡ್, ಓಕುಳಿಪುರ ಹಾಗೂ ಗುಬ್ಬಿ ತೋಟದಪ್ಪ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಬೇಕು ಎಂಬ ಸೂಚನೆ ನೀಡಲಾಗಿದೆ.
ರಸ್ತೆ ಹಾಗೂ ಪಾದಚಾರಿ ಮಾರ್ಗವನ್ನು ಸ್ವಚ್ಛಗೊಳಿಸುವುದು, ರಸ್ತೆ ವಿಭಜಕಗಳಿಗೆ ಬಣ್ಣ ಬಳಿಯುವುದು, ಜಾಹೀರಾತು ಫಲಕ ಹಾಗೂ ಫ್ಲೆಕ್ಸ್ ತೆರವುಗೊಳಿಸುವುದು, ಗುಂಡಿಗಳನ್ನು ಮುಚ್ಚುವುದು ಸೇರಿದಂತೆ ನಗರದ ಸೌಂದರ್ಯ ಕಾಪಾಡಲು ಎಲ್ಲ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.