ಹೊಸಕೋಟೆ: ಮೂವರು ಸರಗಳ್ಳರ ಬಂಧನದಿಂದ ಹೊಸಕೋಟೆ ಹಾಗು ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ-ಯಲ್ಲಿ ಕಳೆದ ಒಂದು ವರ್ಷದಿಂದ ನಡೆಸಿದ್ದ 7 ಪ್ರಕರಣಗಳು ಪತ್ತೆಯಾಗಿ-ದ್ದು, ಪೊಲೀಸರು ಅವರಿಂದ ಸುಮಾರು ₨10 ಲಕ್ಷ ಮೌಲ್ಯದ 373.78 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.
ಹೊಸಕೋಟೆ ಅಂಬೇಡ್ಕರ್ ಕಾಲೋನಿಯ ಗೋಪಿ (35), ನಡವತ್ತಿ ಗ್ರಾಮದ ಸತೀಶ್ (26) ಹಾಗೂ ಆಡುಗೋಡಿಯ ರಾಜ (26) ಅವರನ್ನು ಯಲಹಂಕ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು.
ವಿಚಾರಣೆ ವೇಳೆ ಅವರು ಹೊಸ-ಕೋಟೆ ತಾಲ್ಲೂಕಿನ ವ್ಯಾಪ್ತಿಯಲ್ಲಿಯೂ ಕಳ್ಳತನ ಮಾಡಿರುವುದಾಗಿ ಮಾಹಿತಿ ಕೊಟ್ಟಿದ್ದರು. ನ್ಯಾಯಾಲಯದ ಅನುಮತಿ ಪಡೆದು ಆರೋಪಿಗಳನ್ನು ವಶಕ್ಕೆ ಪಡೆದ ಹೊಸಕೋಟೆ ಪೊಲೀಸರು ತನಿಖೆ ನಡೆಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂತು.
ಬೈಕ್ ಹಾಗೂ ಕಾರಿನಲ್ಲಿ ಬರುತ್ತಿದ್ದ ಆರೋಪಿಗಳು ಪಟ್ಟಣದ ವಿಶ್ವೇಶ್ವರಯ್ಯ ಬಡಾವಣೆ, ಜಿ.ಪಂ.ಕಚೇರಿ ಬಳಿ, ದೊಡ್ಡಹುಲ್ಲೂರು, ಚೀಮಸಂದ್ರ, ಹಿರಂಡಹಳ್ಳಿ ಮೊದಲಾದ ಕಡೆ ನಡೆದು ಹೋಗುತ್ತಿದ್ದ ಮಹಿಳೆಯರನ್ನು ಅಡ್ಡಗಟ್ಟಿ ಅವರ ಕತ್ತಿನಲ್ಲಿದ್ದ ಚಿನ್ನದ ಸರ ಕದ್ದು ಪರಾರಿಯಾಗಿದ್ದರು. ಅಲ್ಲದೆ ಕದ್ದ ಒಡವೆಗಳನ್ನು ಹೊಸಕೋಟೆಯಲ್ಲಿನ ಮಣಪ್ಪುರಂ ಫೈನಾನ್ಸ್ ಕಂಪೆನಿಯಲ್ಲಿ ಅಡವಿಟ್ಟಿದ್ದರು ಎಂದು ಸಿಪಿಐ ಎಚ್.ಬಿ.ರಮೇಶ್ ಕುಮಾರ್ ತಿಳಿಸಿದ್ದಾರೆ.