ಬೆಂಗಳೂರು: ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ನಟ ರಜನಿಕಾಂತ್ ಅವರ ಪತ್ನಿ, ನಿರ್ಮಾಪಕಿ ಲತಾ ರಜನಿಕಾಂತ್ ವಿರುದ್ಧ ಹಲಸೂರು ಗೇಟ್ ಪೊಲೀಸರು ದಾಖಲಿಸಿದ್ದ ಎಫ್ಐಆರ್ಗೆ ಹೈಕೋರ್ಟ್ ಆರು ವಾರಗಳ ಮಧ್ಯಂತರ ತಡೆ ನೀಡಿದೆ.
‘ಕೊಚ್ಚಾಡಿಯನ್’ ತಮಿಳು ಸಿನಿಮಾದ ಹಣಕಾಸು ವ್ಯವಹಾರಗಳ ವಿಭಾಗದ ಸಹಾಯಕಿ ಮಧುಬಾಲಾ ನಹಾರ್ ಹಾಗೂ ‘ಕೊಚ್ಚಡಿಯಾನ್’ ನಿರ್ಮಾಪಕ ಜೆ.ಮುರಳಿ ಮನೋಹರ್ ಅವರ ಮಧ್ಯೆ ವಿವಾದ ತಲೆದೋರಿತ್ತು.
ಈ ವಿವಾದಕ್ಕೆ ಸಂಬಂಧಿಸಿದಂತೆ ಮಧುಬಾಲ ನಗರದ ಎಸಿಎಂಎಂ ನ್ಯಾಯಾಲಯದಲ್ಲಿ ಲತಾ ರಜನಿಕಾಂತ್ ವಿರುದ್ಧ ಖಾಸಗಿ ದೂರೊಂದನ್ನು ದಾಖಲಿಸಿದ್ದರು.
ಈ ದೂರನ್ನು ವಿಚಾರಣೆಗೆ ಅಂಗೀಕರಿಸಿದ್ದ ನ್ಯಾಯಾಲಯ ಎಫ್ಐಆರ್ ದಾಖಲಿಸುವಂತೆ ಹಲಸೂರು ಗೇಟ್ ಪೊಲೀಸರಿಗೆ 2015ರ ಜೂನ್ 9ರಂದು ಆದೇಶಿಸಿತ್ತು. ಇದರನ್ವಯ ಪೊಲೀಸರು ಲತಾ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಲತಾ ರಜನಿಕಾಂತ್ ಹೈಕೋರ್ಟ್ ಮೆಟ್ಟಿಲೇರಿದ್ದರು.