ಬೆಂಗಳೂರು: ಭಾರತೀಯ ವಾಯುಪಡೆಯ 79ನೇ ಸಂಸ್ಥಾಪನಾ ದಿನವನ್ನು ನಗರದ `ಕಮಾಂಡ್ ಆಸ್ಪತ್ರೆ~ಯಲ್ಲಿ ಶನಿವಾರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಾಯುಪಡೆಯ ಅಧಿಕಾರಿಗಳು ಮತ್ತು ಯೋಧರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು, `ದೇಶದ ಸೇನೆಗೆ ಆಧುನಿಕ ಶಸ್ತ್ರಾಸ್ತ್ರಗಳೊಂದೇ ಆಸ್ತಿಯಲ್ಲ. ನಿಮ್ಮಂಥ ನಿಷ್ಠಾವಂತರೂ ಅಮೂಲ್ಯ ಆಸ್ತಿ~ ಎಂದು ಹೇಳಿದರು. ಭಾರತೀಯ ವಾಯುಪಡೆ ಪ್ರಪಂಚದ ಅತಿದೊಡ್ಡ ವಾಯುಪಡೆಗಳಲ್ಲಿ ಒಂದು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಭಾಷಣಕ್ಕೂ ಮೊದಲು ರಾಜ್ಯಪಾಲರು ವಾಯುಪಡೆಯ ಯೋಧರಿಂದ ಗೌರವ ರಕ್ಷೆ ಸ್ವೀಕರಿಸಿದರು. ನಂತರ ಅವರು `ಕಮಾಂಡ್ ಆಸ್ಪತ್ರೆ~ಯ ಕ್ಯಾನ್ಸರ್ ಮತ್ತು ಅಪಘಾತ ಚಿಕಿತ್ಸೆ ವಿಭಾಗಗಳಿಗೆ ಭೇಟಿ ನೀಡಿದರು.
ಭಾರದ್ವಾಜ್ ಅವರ ಪತ್ನಿ ಪ್ರಫುಲ್ಲತಾ ಭಾರದ್ವಾಜ್, ವಾಯುಪಡೆಯ ಅಧಿಕಾರಿಗಳು ಉಪಸ್ಥಿತರಿದ್ದರು.