ಬೆಂಗಳೂರು: ಅಕ್ರಮ ಗಣಿಗಾರಿಕೆಗೆ ಸಹಕಾರ ನೀಡಿದ ಆರೋಪ ಎದುರಿಸುತ್ತಿರುವ ನಿವೃತ್ತ ಐಎಎಸ್ ಅಧಿಕಾರಿ ಶಮೀಂ ಬಾನು ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸಿಬಿಐ ವಿಶೇಷ ನ್ಯಾಯಾಲಯ ಗುರುವಾರಕ್ಕೆ ಮುಂದೂಡಿದೆ. ಜಾಮೀನು ಅರ್ಜಿಗೆ ತಕರಾರು ಅರ್ಜಿ ಸಲ್ಲಿಸಿದ ಸಿಬಿಐ, ಇದೊಂದು ಗಂಭೀರ ಪ್ರಕರಣವಾಗಿರುವುದರಿಂದ ಜಾಮೀನು ಮಂಜೂರು ಮಾಡಬಾರದು ಎಂದು ಕೋರಿತು.
ನ್ಯಾಯಾಧೀಶ ಶ್ರೀಶಾನಂದ ಅವರು ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದರು. ಶಮೀಂ ಪರ ಹಿರಿಯ ವಕೀಲ ಉದಯ್ ಹೊಳ್ಳ ಹಾಜರಾಗಿದ್ದರು.
ಆರೋಪ ಮುಕ್ತ: ಬಂಧನದಿಂದ ಬಿಡುಗಡೆ
ವಿಷಪೂರಿತ ರಾಸಾಯನಿಕ ಗೊಬ್ಬರ ಮಾರಾಟ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದ್ದ ಆರೋಪಿಯೊಬ್ಬನನ್ನು ಹೈಕೋರ್ಟ್ ಬಂಧಮುಕ್ತಗೊಳಿಸಿದೆ. ‘ಮ್ಯೂರಿಯೆಟ್ ಆಫ್ ಪೋಟ್ಯಾಷ್’ ರಾಸಾಯನಿಕ ಗೊಬ್ಬರವನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪದ ಮೇಲೆ ಪಾಂಡ್ಯನ್ ಮುರುಗನ್ ಎಂಬಾತನನ್ನು ಬಂಧಿಸು ವಂತೆ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ 2010ರ ಸೆ.16ರಂದು ಆದೇಶ ಹೊರಡಿಸಿದ್ದರು.
ಬೀದಿಶಾ ಗೋಯೆನ್ ಎಂಬುವವರು ಹೈಕೋರ್ಟ್ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ, ತಮ್ಮ ಪತಿ ಪಾಂಡ್ಯನ್ ಮುರುಗನ್ ಅವರನ್ನು ಪತ್ತೆ ಮಾಡಿ ಕೊಡುವಂತೆ ಕೋರಿದ್ದರು. ಪೊಲೀಸರು ಜೈಲಿನಲ್ಲಿದ್ದ ಪಾಂಡ್ಯನ್ನನ್ನು ಹೈಕೋರ್ಟ್ಗೆ ಹಾಜರು ಪಡಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಎಸ್.ಕೆಂಪಣ್ಣ ಮತ್ತು ನ್ಯಾಯಮೂರ್ತಿ ಎನ್.ಕೆ. ಪಾಟೀಲ್ ಅವರಿದ್ದ ಪೀಠವು ಆರೋಪವನ್ನು ವಜಾಗೊಳಿಸಿ ಪಾಂಡ್ಯನ್ನನ್ನು ಬಂಧಮುಕ್ತಗೊಳಿಸಿತು.