ಬೆಂಗಳೂರು: ಶಿಕ್ಷಣದ ಜತೆಗೆ ಕಲೆಯೂ ಇದ್ದರೆ ಮನುಷ್ಯ ಪರಿಪೂರ್ಣನಾಗಲು ಸಾಧ್ಯ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ವೈಜಯಂತಿ ಕಾಶಿ ಹೇಳಿದರು.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಹಿಮಾಂಶು ಜ್ಯೋತಿ ಕಲಾ ಪೀಠದಲ್ಲಿ ಮಂಗಳವಾರ ನಡೆದ `ರಸಗ್ರಹಣ' ವಿದ್ಯಾರ್ಥಿಗಳಿಗೆ ಸಂಗೀತ ನೃತ್ಯ ಪ್ರಾತ್ಯಕ್ಷಿಕೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಾಲೆಗಳಲ್ಲಿ ಮಕ್ಕಳಿಗೆ ನಮ್ಮ ನಾಡಿನ ಸಂಸ್ಕೃತಿ, ಕಲೆ ಮತ್ತು ಕಲಾವಿದರ ಬಗ್ಗೆ ತಿಳಿಸಬೇಕು. ಆಗ, ಅವರು ನಮ್ಮ ನಾಡು, ದೇಶ, ಸಂಸ್ಕೃತಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಇಂದಿನ ಸ್ಪರ್ಧಾತ್ಮಕ ಯುಗದ ಶಿಕ್ಷಣದಲ್ಲಿ ಅಂಕಗಳನ್ನು ಗಳಿಸುವುದೇ ಮುಖ್ಯ ಎಂದು ಭಾವಿಸಲಾಗುತ್ತದೆ. ಆದರೆ, ಶಿಕ್ಷಣ ಮತ್ತು ಕಲೆಯು ಮಿಳಿತ ಮಾಡಿ ಕಲಿಸಿದರೆ ಆ ಮಗು ಪರಿಪೂರ್ಣವಾಗಿ ಬೆಳೆಯಲು ಸಾಧ್ಯವಾಗುತ್ತದೆ.
ಒಬ್ಬ ಕಲಾವಿದ ಬೆಳೆಯಲು ಅಥವಾ ಪರಿಪೂರ್ಣ ಕಲಾವಿದನಾಗಲು ಸುಮಾರು 30 ರಿಂದ 40 ವರ್ಷಗಳವರೆಗೆ ಅತ್ಯಂತ ಪರಿಶ್ರಮದಿಂದ ಸಾಧನೆ ಮಾಡಿರಬೇಕು. ಅಂತಹ ಸಾಧಕರನ್ನು ಇಂದಿನ ಮಕ್ಕಳು ಮರೆಯಬಾರದು ಅವರನ್ನು ಗುರುತಿಸುವಂತಾಗಬೇಕು ಎಂದರು.
ಶಾಲೆಯ ಮಕ್ಕಳಿಗೆ ನಮ್ಮ ನಾಡಿನ ಸಂಸ್ಕೃತಿ, ನೃತ್ಯ ಮತ್ತು ಸಂಗೀತವನ್ನು ತಿಳಿಸಲು `ರಸಗ್ರಹಣ' ಕಾರ್ಯಕ್ರಮವನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಲಾಗಿದೆ. ಮಕ್ಕಳ ಉನ್ನ ತಿಯೇ ಕಾರ್ಯಕ್ರಮದ ಧ್ಯೇಯೋದ್ದೇಶವಾಗಿದೆ ಎಂದು ಹೇಳಿದರು.