ಬೆಂಗಳೂರು: ‘ಕಾಡುಗೋಡಿ ಪ್ಲಾಂಟೇಷನ್ ಪ್ರದೇಶದಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು’ ಎಂದು ಒತ್ತಾಯಿಸಿ ನೂರಾರು ರೈತರು ಜಾಥಾ ನಡೆಸಿದರು.
‘ಇಲ್ಲಿ ಏಳು ದಶಕಗಳಿಂದ ನೆಲೆಸಿದ್ದೇವೆ. ಆದರೆ, ಸರ್ಕಾರ ಇದನ್ನು ಪ್ಲಾಂಟೇಷನ್ ಭೂಮಿ ಎಂದು ಘೋಷಿಸಿ ಬಂಡವಾಳಶಾಹಿಗಳಿಗೆ ನಿಂತಿದೆ’ ಎಂದು ಪ್ರತಿಭಟನಾಕಾರರು ದೂರಿದರು.
‘ರೈತ ಕುಟುಂಬಗಳಿಗೆ 1950ರಲ್ಲಿ ಕೃಷಿಗೆ 150 ಎಕರೆ ಹಾಗೂ ವಾಸಕ್ಕೆ 34 ಎಕರೆ ಹಂಚಿಕೆ ಮಾಡಲಾಗಿತ್ತು. ಕಂಪ್ಯೂಟರ್ ಪಹಣಿ ಹೊರತುಪಡಿಸಿ ಎಲ್ಲ ದಾಖಲೆಗಳು ನಮ್ಮ ಬಳಿ ಇವೆ. ಆದರೂ, ಜಿಲ್ಲಾಡಳಿತ 2016ರಲ್ಲಿ ಇಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ ಅನ್ಯಾಯ ಮಾಡಿತ್ತು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಜಿಲ್ಲಾಡಳಿತದ ಕ್ರಮವನ್ನು ವಿರೋಧಿಸಿ ಸ್ವಾತಂತ್ರ್ಯ ಉದ್ಯಾನದವರೆಗೆ ಪಾದಯಾತ್ರೆ ನಡೆಸಿದ್ದೆವು. ಹಕ್ಕುಪತ್ರ ವಿತರಿಸುವುದಾಗಿ ಕಂದಾಯ ಸಚಿವರು ಭರವಸೆ ನೀಡಿದ್ದರು. ಎರಡು ವರ್ಷ ಕಳೆದರೂ ಬೇಡಿಕೆ ಈಡೇರಿಸಿಲ್ಲ’ ಎಂದು ದೂರಿದರು.
‘ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರವು ಪೊಲೀಸರನ್ನು ಕೈಗೊಂಬೆಗಳನ್ನಾಗಿಸಿ ರೈತರ ಮೇಲೆ ದರ್ಪ ಮೆರೆಯುತ್ತಿದೆ. ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ’ ಎಂದು ಪಾಲಿಕೆ ಸದಸ್ಯ ಎಸ್.ಮುನಿಸ್ವಾಮಿ ತಿಳಿಸಿದರು.