ಬೆಂಗಳೂರು: ‘ಮಂಗಳೂರಿನಲ್ಲಿ ನಡೆಯುತ್ತಿರುವ ಹಿಂದೂ ಮತ್ತು ಮುಸ್ಲಿಂ ಕಲಹಗಳಿಗೆ ಅಂತರರಾಷ್ಟ್ರೀಯ ಭಯೋತ್ಪಾದನೆಯ ನೆರಳು ಇದೆ’ ಎಂದು ಹಿಂದೂ ಜಾಗರಣಾ ವೇದಿಕೆಯ ರಾಜ್ಯ ಸಂಚಾಲಕ ಜಗದೀಶ್ ಕಾರಂತ್ ಹೇಳಿದರು.
ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಹೆಸರಘಟ್ಟ ಸಮೀಪದ ಅದ್ದಿಗಾನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ‘ಹಿಂದೂ ಜಾಗೃತಿ ಸಮಾವೇಶ’ದಲ್ಲಿ ಅವರು ಮಾತನಾಡಿದರು.
‘ಭಯೋತ್ಪಾದನೆಯ ಬೆಂಕಿ ಕರಾವಳಿ ಭಾಗದಲ್ಲಿ ಹೊತ್ತಿ ಉರಿಯುತ್ತಿದೆ. ಇದಕ್ಕೆ ಕಡಿವಾಣ ಹಾಕದಿದ್ದರೆ, ಇಡೀ ನಾಡಿಗೆ ಅಪಾಯ ಕಾದಿದೆ’ ಎಂದು ಎಚ್ಚರಿಕೆ ನೀಡಿದರು.
‘ರಾಜಕಾರಣಿಗಳು ಮತದಾರರ ಓಲೈಕೆಗಾಗಿ ಹಿಂದೂಗಳ ಹಿತವನ್ನು ಬಲಿಕೊಡುತ್ತಿದ್ದಾರೆ. ಗೋಹತ್ಯೆ ನಿಷೇಧ ಮಾಡಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ದೂರಿದರು.
‘ದಲಿತ, ಒಕ್ಕಲಿಗ, ವೀರಶೈವ ಹಾಗೂ ಬ್ರಾಹ್ಮಣರು ಮತಾಂತರಗೊಳ್ಳುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಹಿಂದೂ ಧರ್ಮ ಸಂಪೂರ್ಣ ನಾಶವಾಗುತ್ತದೆ. ಹೀಗಾಗಿ ಹಿಂದೂಗಳು ಜಾಗೃತರಾಗಿ ಮತಾಂತರವನ್ನು ವಿರೋಧಿಸಬೇಕು’ ಎಂದರು.