ಯಲಹಂಕ: `ಒಂದು ಕಾಲದಲ್ಲಿ ಬೆಂಗಳೂರು ನಗರಕ್ಕೆ ನೀರೊದಗಿಸುತ್ತಿದ್ದ ಹೆಸರಘಟ್ಟ ಕೆರೆಯನ್ನು ಪುನಶ್ಚೇತನಗೊಳಿಸುವ ಕಾಮಗಾರಿಗೆ ಸರ್ಕಾರವು 23.45 ಕೋಟಿ ರೂಪಾಯಿ ಮಂಜೂರು ಮಾಡಿದೆ~ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದರು.
ಹೆಸರಘಟ್ಟದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ದಿನಾಚರಣೆ ಸಮಾರಂಭ ವನ್ನು ಉದ್ಘಾಟಿಸಿ ಅವರು ಮಾತನಾಡಿ ದರು. ಕೆರೆ ಪುನಶ್ಚೇತನ ಕಾಮಗಾರಿಗೆ ಈಗಾಗಲೆ ಟೆಂಡರ್ ಪ್ರಕ್ರಿಯೆ ಪೂರ್ಣ ಗೊಂಡಿದ್ದು, ಮುಂದಿನ ತಿಂಗಳು ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದರು.
ವಿದ್ಯಾರ್ಥಿಗಳು ಸ್ವಾಭಿಮಾನ ಮತ್ತು ಆತ್ಮಗೌರವವನ್ನು ಬೆಳೆಸಿಕೊಂಡು ಜೀವನ ದಲ್ಲಿ ತಮ್ಮ ಗುರಿಯನ್ನು ಮುಟ್ಟಬೇಕು. ಹಳ್ಳಿಗಾಡಿನ ಮಕ್ಕಳು ಸದೃಢರಾಗಿದ್ದು, ವಯೋಮಾನಕ್ಕನುಗುಣವಾಗಿ ಪ್ರಗತಿ ಸಾಧಿಸಲು ಅವಕಾಶವಿರುವುದರಿಂದ ಕೀಳರಿಮೆಯನ್ನು ತೊರೆದು ಓದುವ ಕಡೆಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಂ.ಮಾರೇಗೌಡ, ಪ್ರಾಂಶುಪಾಲ ಡಾ.ಎಂ.ಎಲ್.ಶಂಕರಲಿಂಗಪ್ಪ ಮೊದ ಲಾದವರು ಉಪಸ್ಥಿತರಿದ್ದರು.