ಬೆಂಗಳೂರು: ‘ನಗರ ಬೃಹದಾಕಾರವಾಗಿ ಬೆಳೆದಿದ್ದು, ಆಯುಕ್ತರೊಬ್ಬರಿಂದಲೇ ಇಡೀ ನಗರದ ಆಡಳಿತ ನಿರ್ವಹಣೆ ಕಷ್ಟದ ಕೆಲಸ. ಹೀಗಾಗಿ ವಿಕೇಂದ್ರೀಕೃತ ವ್ಯವಸ್ಥೆ ರೂಪಿಸುವುದು ಉತ್ತಮ’ ಎಂದು ಬಿಬಿಎಂಪಿ ಆಡಳಿತಾಧಿಕಾರಿ ಟಿ.ಎಂ. ವಿಜಯಭಾಸ್ಕರ್ ಪ್ರತಿಪಾದಿಸಿದರು.
ಸ್ಮಾರ್ಟ್ ಸಿಟೀಸ್ ಇಂಡಿಯಾ ಫೌಂಡೇಷನ್ ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಸ್ಮಾರ್ಟ್ ಕ್ಯಾಪಿಟಲ್: ಕ್ರಿಯೇಟಿಂಗ್ ಸ್ಮಾರ್ಟ್ ಸೊಲ್ಯೂಷನ್ಸ್ ಫಾರ್ ಬೆಂಗಳೂರು’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ‘ನಗರದ ಹೃದಯಭಾಗ ಹಾಗೂ ಹೊಸದಾಗಿ ಸೇರ್ಪಡೆಯಾದ ಪ್ರದೇಶಗಳ ಸಮಸ್ಯೆಯ ನಡುವೆ ವ್ಯತ್ಯಾಸ ಇದೆ. ಹೊಸದಾಗಿ ಸೇರ್ಪಡೆಯಾದ ಪ್ರದೇಶಕ್ಕೆ ಮೂಲಸೌಕರ್ಯ ಒದಗಿಸುವುದು ಬಹುದೊಡ್ಡ ಸವಾಲು. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು 3–4 ಆಯುಕ್ತರ ಅಗತ್ಯ ಇದೆ. ಇವರ ನಡುವೆ ಸಮನ್ವಯ ಇಲ್ಲದಿದ್ದರೆ ಮತ್ತಷ್ಟು ಸಮಸ್ಯೆ ಸೃಷ್ಟಿಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
‘ನಗರದ ಜನಸಂಖ್ಯೆ ಈಗ 1.1 ಕೋಟಿ ಇದೆ. ಮುಂಬೈಯ ಜನಸಂಖ್ಯೆ 27 ಕೋಟಿ. ಬಿಬಿಎಂಪಿಯ ಈ ವರ್ಷದ ಬಜೆಟ್ ₨5411 ಕೋಟಿ. ಮುಂಬೈ ಪಾಲಿಕೆಯ ಬಜೆಟ್ ಮೊತ್ತ ₨33 ಸಾವಿರ ಕೋಟಿ. ಜಲಮಂಡಳಿಯ ಬಜೆಟ್ ಸೇರಿಸಿದರೂ ನಮ್ಮ ಬಜೆಟ್ ಮೊತ್ತ ₨10 ಸಾವಿರ ಕೋಟಿ ದಾಟುವುದಿಲ್ಲ. ಕಳೆದ ಕೆಲವು ವರ್ಷಗಳಿಂದ ವಾಸ್ತವ ಬಜೆಟ್ ಮಂಡಿಸದೆ ಸಮಸ್ಯೆ ಜಾಸ್ತಿಯಾಗಿದೆ’ ಎಂದರು.
ಬಿಬಿಎಂಪಿಯ ವಿಶೇಷ ಆಯುಕ್ತ (ಘನತ್ಯಾಜ್ಯ) ದರ್ಪಣ್ ಜೈನ್ ಮಾತನಾಡಿ, ‘ನಗರದ 50 ಕಿ.ಮೀ. ವ್ಯಾಪ್ತಿಯಲ್ಲಿ 9 ಪಟ್ಟಣ ಪ್ರದೇಶಗಳು (ಕ್ಲಸ್ಟರ್ಗಳು) ಹಾಗೂ 100 ಕಿ.ಮೀ. ವ್ಯಾಪ್ತಿಯಲ್ಲಿ 9 ಪಟ್ಟಣ ಪ್ರದೇಶಗಳು ಇವೆ.
ನಗರದ ಅಭಿವೃದ್ಧಿ ಹಾಗೂ ಪಟ್ಟಣಗಳ ಅಭಿವೃದ್ಧಿ ಚಟುವಟಿಕೆಯಲ್ಲಿ ಸಮನ್ವಯದ ಕೊರತೆ ಇದೆ. ಈ ಕ್ಲಸ್ಟರ್ಗಳಲ್ಲಿ ಸಮಗ್ರ ಯೋಜನೆ ಇಲ್ಲ. ಉನ್ನತ ಮಟ್ಟದ ಮೂಲಸೌಕರ್ಯ ವ್ಯವಸ್ಥೆ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.