ಬೆಂಗಳೂರು: ‘ದೇಶದ ಅಣುಶಕ್ತಿ ಕ್ಷೇತ್ರದ ಬೆಳವಣಿಗೆಗೆ ಡಾ.ರಾಜಾ ರಾಮಣ್ಣ ಅವರ ಕೊಡುಗೆ ಅಪಾರ’ ಎಂದು ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ ಹೇಳಿದರು.
ಬಿಎನ್ಇಎಸ್ ಕಾಲೇಜಿನಲ್ಲಿ ಮಂಗಳವಾರ ನಡೆದ ‘ರಾಜಾ ರಾಮಣ್ಣ ಸ್ಮಾರಕ ವಿಜ್ಞಾನ ದಿನಾ ಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಅಣುಶಕ್ತಿ ಕೆಲವೇ ದೇಶಗಳಿಗೆ ಸೀಮಿತವಾಗಿದ್ದ ಕಾಲದಲ್ಲಿ ಸಂಶೋಧನೆಗೆ ತೊಡಗಿದವರು ರಾಜಾ ರಾಮಣ್ಣ ಎಂದರು.
ಕಾಲೇಜಿನ ಗೌರವ ಕಾರ್ಯದರ್ಶಿ ಪ್ರೊ.ಕೆ.ಇ.ರಾಧಾಕೃಷ್ಣ ಮಾತನಾಡಿ, ‘ರಾಜಾ ರಾಮಣ್ಣ ವಿಜ್ಞಾನವನ್ನು ಸೂಕ್ಷ್ಮತೆಯ ಕಣ್ಣುಗಳಿಂದ ನೋಡುತ್ತಿದ್ದರು. ಮಾನವೀಯತೆ ತುಂಬಿದ ಅಪರೂಪದ ವಿಜ್ಞಾನಿ ಅವರು ಎಂದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಆರ್.ಶಿವಕುಮಾರ್ ಮಾತನಾಡಿ, ‘ವಿದ್ಯಾರ್ಥಿಗಳು ವಿವಿಧ ವಿಷಯಗಳ ಬಗ್ಗೆ ಹೆಚ್ಚು ಹೆಚ್ಚು ಓದುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ರಾಜಾ ರಾಮಣ್ಣ ಅವರನ್ನು ಮಾದರಿಯಾಗಿ ಸ್ವೀಕರಿಸಬೇಕು’ ಎಂದು ಹೇಳಿದರು.