ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

131 ಮಂದಿಗೆ ಕಿರು ಉತ್ಪಾದನಾ ಘಟಕ ವಿತರಣೆ

ಸ್ವ ಉದ್ಯೋಗಕ್ಕೆ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಸಂಘ ನೆರವು
Last Updated 13 ಏಪ್ರಿಲ್ 2022, 11:07 IST
ಅಕ್ಷರ ಗಾತ್ರ

ಬೀದರ್: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘವು ಕಿರು ಉತ್ಪಾದನಾ ಯಂತ್ರಗಳ ವಿತರಣೆ ಮೂಲಕ ಜಿಲ್ಲೆಯ 131 ಫಲಾನುಭವಿಗಳಿಗೆ ಸ್ವ ಉದ್ಯೋಗಕ್ಕೆ ನೆರವಾಗಿದೆ.

ನಗರದ ಪ್ರತಾಪನಗರದ ಜನಸೇವಾ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಸಂಘದ ಸ್ವಯಂ ಉದ್ಯೋಗ ಯೋಜನೆಯಡಿ ಫಲಾನುಭವಿಗಳಿಗೆ ಒಟ್ಟು ₹ 2.5 ಕೋಟಿ ಮೊತ್ತದ ಪೇಪರ್ ಪ್ಲೇಟ್, ದಾಲ್ ಮಿಲ್, ಬೇಕರಿ, ನಮಕೀನ್ ಸೇರಿದಂತೆ 12 ಬಗೆಯ ಕಿರು ಉತ್ಪಾದನಾ ಯಂತ್ರಗಳನ್ನು ವಿತರಿಸಲಾಯಿತು.

ಬಡ ಕುಟುಂಬಗಳ ಆರ್ಥಿಕ ಸ್ಥಿತಿ ಎತ್ತರಿಸಲು ನೆರವಾಗುವುದೇ ಕಿರು ಉತ್ಪಾದನಾ ಘಟಕಗಳ ವಿತರಣೆಯ ಉದ್ದೇಶವಾಗಿದೆ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ನಿರ್ದೇಶಕಿಯೂ ಆದ ಸ್ವಯಂ ಉದ್ಯೋಗ ಯೋಜನೆ ಉಪ ಸಮಿತಿಯ ಅಧ್ಯಕ್ಷೆ ಮಂಜುಳಾ ಡೋಳೆ ಹೇಳಿದರು.

ಸಂಘದ ಸ್ವಯಂ ಉದ್ಯೋಗ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಯಂತ್ರಗಳ ಮೇಲೆ ಶೇ 75 ರಷ್ಟು ಹಾಗೂ ಇತರಿಗೆ ಶೇ 70 ರಷ್ಟು ಸಬ್ಸಿಡಿ ಇದೆ ಎಂದು ತಿಳಿಸಿದರು.

ಸಂಘವು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಶಿಕ್ಷಣ, ಕೃಷಿ, ಮಹಿಳಾ, ಯುವ ಸಬಲೀಕರಣ ಸೇರಿದಂತೆ ಏಳು ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಭಾಗದ ಸಮಗ್ರ ವಿಕಾಸಕ್ಕೆ ಶ್ರಮಿಸುತ್ತಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ಹೇಳಿದರು.

ಜಿಲ್ಲೆಯ ಎಂಟೂ ತಾಲ್ಲೂಕುಗಳ ಆಯ್ಕೆ ಮಾಡಲಾದ ಬಡ ಫಲಾನುಭವಿಗಳಿಗೆ ಕಿರು ಉತ್ಪಾದನಾ ಯಂತ್ರಗಳನ್ನು ವಿತರಿಸಲಾಗಿದೆ. ಫಲಾನುಭವಿಗಳು ಯಂತ್ರಗಳನ್ನು ಬಳಸಿಕೊಂಡು ಸ್ವಾವಲಂಬಿಗಳಾಗಬೇಕು. ಇತರರಿಗೂ ಉದ್ಯೋಗ ಕಲ್ಪಿಸಬೇಕು ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘವು ಕಿರು ಉತ್ಪಾದನಾ ಯಂತ್ರಗಳ ಮೂಲಕ ಬಡವರ ಬದುಕಿಗೆ ಆಸರೆಯಾಗಿದೆ ಎಂದು ಫಲಾನುಭವಿಗಳು ಹೇಳಿದರು.

ಪ್ರವರ್ಧ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಲ್ಲಿಕಾರ್ಜುನ ಕೌಜಲಗಿ, ಸಮೃದ್ಧಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಪುನೀತ್ ಸಾಳೆ, ಸಂಘದ ಜಿಲ್ಲಾ ಸಂಯೋಜಕ ಬಸವರಾಜ ಅಷ್ಟಗಿ, ಪ್ರಶಾಂತ ಸಿಂಧೆ, ಕಲ್ಪನಾ, ಸಚಿನ್ ನಾಗೂರೆ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಜಿಲ್ಲಾ ಸಂಯೋಜಕ ರೇವಣಸಿದ್ದ ಜಾಡರ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT