ಕುಶಾಲನಗರ: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಮಂಗಳವಾರ ಮಧ್ಯಾಹ್ನ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಸುರಿದಿದೆ.
ಸತತ ಎರಡು ತಾಸಿಗೂ ಹೆಚ್ಚು ಕಾಲ ಸುರಿಯಿತು. ಮುಳ್ಳುಸೋಗೆ ಗ್ರಾ.ಪಂ ವ್ಯಾಪ್ತಿಯ ಗೊಂದಿಬಸವನಹಳ್ಳಿ, ಕೂಡ್ಲೂರು ಮಂಟಿ, ಚಿಕ್ಕಹೊಸೂರು ವ್ಯಾಪ್ತಿಯಲ್ಲಿ ಮರಗಳು ಧರೆಗೆ ಉರುಳಿವೆ. ಕೆಲವು ಕಡೆಗಳಲ್ಲಿ ವಿದ್ಯುತ್ ಕಂಬಗಳಿಗೂ ಹಾನಿಯಾಗಿರುವ ಕಾರಣ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ.
ಮೈಸೂರು ತಾಲ್ಲೂಕಿನ ವರುಣಾ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಆಲಿಕಲ್ಲು ಸಹಿತ ಮಳೆ ಸುರಿಯಿತು. ಹುಣಸೂರು ಪಟ್ಟಣದಲ್ಲಿ ತುಂತುರು ಮಳೆಯಾಗಿದೆ.
ಹಾಸನ ನಗರದಲ್ಲಿ ತುಂತುರು ಮಳೆಯಾಗಿದೆ. ಅರಕಲಗೂಡು ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವೆಡೆ ಮಂಗಳವಾರ ಭಾರಿ ಗಾಳಿ ಗುಡುಗು ಸಹಿತ ಮಳೆ ಸುರಿಯಿತು. ಭಾರಿ ಗಾಳಿಗೆ ಪಟ್ಟಣದ ಹೊರವಲಯದ ಹಾಸನ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಅರಳಿ ಮರ ಬಿದ್ದಿದ್ದರಿಂದ ಸಂಚಾರಕ್ಕೆ ಕೆಲಹೊತ್ತು ಅಡಚಣೆಯಾಗಿತ್ತು.
ಮನೆಗೆ ನುಗ್ಗಿದ ನೀರು: ಕಸಬಾ ಹೋಬಳಿ ಮರವಳಲು ಗ್ರಾಮದಲ್ಲಿ ಮಂಗಳವಾರ ಬಿದ್ದ ಭಾರಿ ಮಳೆಗೆ ಪಟೇಲ್ ರಾಜೇಗೌಡ ಅವರ ಮನೆಗೆ ನೀರು ನುಗ್ಗಿ ದವಸ ಧಾನ್ಯ ಹಾನಿಯಾಗಿದೆ.