ಹುಮನಾಬಾದ್: ತಾಲ್ಲೂಕಿನ ಧುಮ್ಮನಸೂರ್ ಗ್ರಾಮದಲ್ಲಿ ಮಳೆಯಿಂದ ಮನೆ ಕುಸಿದುಬಿದ್ದಿರುವ ಕುಟುಂಬದ ಸದಸ್ಯರಿಗೆ ಶಾಸಕ ರಾಜಶೇಖರ ಪಾಟೀಲ ಅವರು ₹50 ಸಾವಿರ ನೆರವು ನೀಡಿದ್ದಾರೆ.
ಪ್ರಕಾಶ್ ಭೋಮಶೆಟ್ಟಿ (38) ನಿಧನ ಹೊಂದಿದ ಮರುದಿನವೇ ಮಳೆಯಿಂದ ಅವರ ಮನೆ ಕುಸಿದು ಬಿದ್ದಿದೆ. ಈ ವಿಷಯ ತಿಳಿದ ಶಾಸಕರು ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ ಅವರ ಪತ್ನಿಗೆ ಧೈರ್ಯ ಹೇಳಿದರು.
ಮೃತ ವ್ಯಕ್ತಿಯ ಇಬ್ಬರು ಪುತ್ರಿಯರ ಮುಂದಿನ ಶಿಕ್ಷಣವನ್ನು ತಾವೇ ನೋಡಿಕೊಳ್ಳುವುದಾಗಿ ಶಾಸಕರು ಭರವಸೆ ನೀಡಿದರು.
ಸರ್ಕಾರದ ವತಿಯಿಂದ ಯಾವುದಾದರೂ ಒಂದು ವಸತಿ ಯೋಜನೆಯಡಿ ಮನೆ ಮಂಜೂರು ಮಾಡಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮಣರಾವ ಬುಳ್ಳಾ, ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಅಫ್ಸರ್ ಮಿಯ್ಯಾ, ಶಿವರಾಜ ಗಂಗಶೆಟ್ಟಿ, ಪ್ರಕಾಶ ಕಾಡಗೊಂಡ, ಉಮೇಶ್ ಜಮಗಿ, ಬಸವರಾಜ ಶೇರಿಕಾರ, ಸಂಗಮೇಶ ಪಾಟೀಲ, ಘಾಳೆಪ್ಪ ಹುಂಡೆಕರ್, ಶ್ರೀಕಾಂತ ಪಾಟೀಲ, ಉಮೇಶ ಪಾಟೀಲ, ವೀರಪ್ಪ ಭೂತಾಳೆ ಇದ್ದರು.