ಹುಮನಾಬಾದ್: ವರ್ಗಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಇಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಶೋಭಾ ಕಟ್ಟಿ ₹30 ಸಾವಿರ ಲಂಚ ಪಡೆಯುತ್ತಿರುವಾಗ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.
ಸೀತಾಗೇರಾ ಗ್ರಾಮದ ಅಂಗನವಾಡಿ ಕೇಂದ್ರದ ಶಿಕ್ಷಕಿ ಅಂಬಿಕಾ ಸಿದ್ದಾರ್ಥ ಡಾಂಗೆ ಅವರು ಘೋಡವಾಡಿ ಅಂಗನವಾಡಿ ಕೇಂದ್ರಕ್ಕೆ ವರ್ಗಾವಣೆ ಮಾಡುವಂತೆ ಸಿಡಿಪಿಒ ಶೋಭಾ ಕಟ್ಟಿ ಅವರಿಗೆ ಹಲವಾರು ಬಾರಿ ಮನವಿಪತ್ರ ಸಲ್ಲಿಸಿದ್ದರು. ವರ್ಗಾವಣೆಗಾಗಿ ಸಿಡಿಪಿಒ ₹50 ಸಾವಿರ ಲಂಚದ ಬೇಡಿಕೆ ಇಟ್ಟಿದರು. ಮೊದಲ ಕಂತಿನಲ್ಲಿ ₹30 ಸಾವಿರ, ನಂತರ ₹20 ಸಾವಿರ ಕೂಡಬೇಕು ಎಂದು ಹೇಳಿದ್ದರಿಂದ ಅಂಬಿಕಾ ಅವರ ಪತಿ ಸಿದ್ದಾರ್ಥ ಡಾಂಗೆ ಎಸಿಬಿಗೆ ದೂರು ನೀಡಿದ್ದರು.
ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿ ಮಹೇಶ ಮೇಘಣ್ಣನವರ, ಡಿವೈಎಸ್ಪಿ ವೀರೇಶ ಕರಡಿಗುಡ್ಡಾ, ಸಿಪಿಐ ಶರಣಬಸವಪ್ಪಾ ಕೊಡ್ಲಾ, ಸಿಪಿಐ ವೆಂಕಟೇಶ ಯಾಡಹಳ್ಳಿ ಅವರು ಶುಕ್ರವಾರ ದಾಳಿ ನಡೆಸಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.