ಹುಮನಾಬಾದ್: ಈ ಬಾರಿ ಮುಂಗಾರು ಮಳೆ ಉತ್ತಮವಾಗಿ ಸುರಿದಿದೆ. ಪಟ್ಟಣ ಸೇರಿದಂತೆ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳೆದ ಹೆಸರು, ಉದ್ದು, ತೊಗರಿ, ಸೋಯಾ ಫಸಲು ಉತ್ತಮವಾಗಿ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರು ಕೀಟ ಬಾಧೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ.
ಕಾರಣ ತಾಲ್ಲೂಕಿನ ಹಳ್ಳಿಖೇಡ (ಬಿ) ಗ್ರಾಮದ ರೈತರ ಹೊಲಗಳಿಗೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ಉಪ ಕೃಷಿ ನಿರ್ದೇಶಕ ಚಂದ್ರಶೇಖರ ನಾಯಕ, ಸಹಾಯಕ ಕೃಷಿ ನಿರ್ದೇಶಕ ಗೌತಮ ತಂಡ ಭೇಟಿ ನೀಡಿ ಹಸಿರು ಹುಳುವಿನ ಬಾಧೆ ಕುರಿತು ರೈತರಿಗೆ ಮಾಹಿತಿ ನೀಡಿದರು.
ತಾಲ್ಲೂಕು ಕೃಷಿ ನಿರ್ದೇಶಕ ಗೌತಮ್ ಮಾತನಾಡಿ,‘ಉತ್ತಮ ಮಳೆ ಆದರು ಅಥವಾ ಆಗದೆ ಇದ್ದರೂ ಬೆಳೆಗಳಲ್ಲಿ ರೋಗದ ಬಾಧೆ ನಿರಂತರವಾಗಿ ಕಂಡುಬರುತ್ತಿದೆ. ಹೀಗಾಗಿ ರೈತರು ನಿರ್ಲಕ್ಷ್ಯ ಮಾಡುವುದು ಬೇಡ. ಹುಳುವಿನ ಬಾಧೆ ಕಂಡ ಬಂದರೆ, ಅವುಗಳ ನಿಯಂತ್ರಣಕ್ಕಾಗಿ ಕ್ಲೋರೋಪೈರಿಫಾಸ್ ಒಂದು ಲೀಟರ್ ನೀರಿಗೆ ಎರಡು ಎಂಎಲ್ ಅಥವಾ ಕ್ವಿನಾಲ್ ಫಾಸ್ ಲೀಟರ್ಗೆ ಎರಡು ಎಂಎಲ್ ಅಥವಾ ಬೇಂಜೋಯಿಟಂ ಒಂದು ಲೀಟರ್ ನೀರಿ 4 ಗ್ರಾಂ ನಂತೆ ಸಿಂಪಡಣೆ ಮಾಡಿ ಬೆಳೆಯನ್ನು ಸಂರಕ್ಷಣೆ ಮಾಡಿಕೊಳ್ಳಬೇಕು ಎಂದು ರೈತರಿಗೆ ಅವರು ಸಲಹೆ ನೀಡಿದರು.