ಔರಾದ್: ಇಲ್ಲಿಯ ಸಹಾಯಕ ಕೃಷಿ ನಿರ್ದೇಶಕ ಧುಳಪ್ಪ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಕಮಲನಗರ ರೈತ ಸಂಪರ್ಕ ಕೇಂದ್ರಕ್ಕೆ ತಮಗೆ ಬೇಕಾದವರಿಗೆ ಪ್ರಭಾರ ವಹಿಸಿಕೊಟ್ಟಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ದೂರಿದೆ. ಸಮಿತಿ ತಾಲ್ಲೂಕು ಸಂಚಾಲಕ ಸುಭಾಷ ಲಾಧಾ ಹಾಗೂ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಈ ಕುರಿತು ದೂರು ನೀಡಿದ್ದಾರೆ.
ಕಮಲನಗರ ಕೃಷಿ ಅಧಿಕಾರಿ ವೈಜಿನಾಥ ಬಿರಾದಾರ ನಿವೃತ್ತರಾಗಿದ್ದು, ಅವರ ಸ್ಥಳದಲ್ಲಿ ಕೃಷಿ ಅಧಿಕಾರಿ ಸ್ವಾತಿ ಅವರಿಗೆ ಪ್ರಭಾರ ನೀಡಿದ್ದಾರೆ. ಇದು ಸಂಪೂರ್ಣ ನಿಯಮಬಾಹಿರ ಆಗಿರುವುದರಿಂದ ಸಹಾಯಕ ಕೃಷಿ ನಿರ್ದೇಶಕರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಬೀದರ್ ಉಪ ಕೃಷಿ ನಿರ್ದೇಶಕ ರಾಘವೇಂದ್ರ ಅವರು ಅಧಿಕಾರ ಬಳಸಿ ನಿಯಮಬಾಹಿರವಾಗಿ ಸಂತಪುರ ಹಾಗೂ ಕಮಲನಗರ ಹೆಚ್ಚುವರಿ ಬೀಜ ವಿತರಣೆ ಕೇಂದ್ರಕ್ಕೆ ಕಾರ್ಯಭಾರ ವಹಿಸಿದ್ದಾರೆ. ಈ ಬಗ್ಗೆಯೂ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಇದೇ 7ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ದೂರಿನಲ್ಲಿ ತಿಳಿಸಿದ್ದಾರೆ.
‘ಕಮಲನಗರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವೈಜಿನಾಥ ಬಿರಾದಾರ ನಿವೃತ್ತರಾದ ಹಿನ್ನೆಲೆಯಲ್ಲಿ ಜಂಟಿ ನಿರ್ದೇಶಕರಿಂದ ಅನುಮತಿ ಪಡೆದು ಠಾಣಾಕುಶನೂರ ಕೃಷಿ ಅಧಿಕಾರಿಗೆ ಪ್ರಭಾರ ವಹಿಸಿಕೊಡಲಾಗಿದೆ. ಹೀಗಾಗಿ ಅಧಿಕಾರ ದುರ್ಬಳಕೆ ಹೇಗೆ ಆಗುತ್ತದೆ’ ಎಂದು ಸ್ಪಷ್ಟನೆ ನೀಡಿದ್ದಾರೆ.