ಬೀದರ್: ವೇತನ ಪರಿಷ್ಕರಣೆ ಮಾಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬ್ಯಾಂಕ್ ಅಧಿಕಾರಿಗಳು ಜಿಲ್ಲೆಯಲ್ಲಿ ಶುಕ್ರವಾರ ಮುಷ್ಕರ ನಡೆಸಿದರು.
ಅಖಿಲ ಭಾರತ ಮಟ್ಟದ ಕರೆಯ ಮೇರೆಗೆ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಹಾಗೂ ಎಸ್ಬಿಐ ಅಧಿಕಾರಿಗಳ ಒಕ್ಕೂಟದ ಬೀದರ್ ಘಟಕದ ನೇತೃತ್ವದಲ್ಲಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಅಧಿಕಾರಿಗಳು ಘೋಷಣೆಗಳನ್ನು ಕೂಗಿದರು. ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶ್ರೇಣಿ 1 ರಿಂದ ಶ್ರೇಣಿ 7 ರ ವರೆಗಿನ ಅಧಿಕಾರಿಗಳ ವೇತನ ಪರಿಷ್ಕರಣೆಗೆ ಸಮ್ಮತಿ ನೀಡಬೇಕು. ಈಗಾಗಲೇ ಸಲ್ಲಿಸಿದ ಬೇಡಿಕೆ ಅನುಸಾರವೇ ವೇತನ ಪರಿಷ್ಕರಣೆ ಮಾಡಬೇಕು. ಕೆಲಸ ಹಾಗೂ ವೈಯಕ್ತಿಕ ಜೀವನದ ನಡುವೆ ಸಮನ್ವಯ ಕಾಪಾಡಬೇಕು. 5 ದಿನಗಳ ಕೆಲಸದ ವಾರವನ್ನು ಜಾರಿಗೆ ತರಬೇಕು. ಕುಟುಂಬ ಪಿಂಚಣಿ ಯೋಜನೆ ಮರು ಪರಿಶೀಲಿಸಬೇಕು. ಎನ್.ಪಿ.ಎಸ್. ತೆಗೆದು ಹಾಕಿ ಹಳೆಯ ಪಿಂಚಣಿ ಯೋಜನೆಯನ್ನೇ ಜಾರಿಗೊಳಿಸಬೇಕು. ಕ್ಯಾಥೋಲಿಕ್ ಸಿರಿಯನ್ ಬ್ಯಾಂಕ್ ಹಾಗೂ ಐಡಿಬಿಐ ಬ್ಯಾಂಕ್ಗಳ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು. ಆರ್ಆರ್ಬಿಯ ಸೌಲಭ್ಯ ಹಾಗೂ ಪಿಂಚಣಿಯನ್ನು ಪಿಎಸ್ಬಿಗೆ ಸಮಾನವಾಗಿ ನೀಡಬೇಕು ಎಂದು ಆಗ್ರಹಿಸಿದರು.
ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಚಂದ್ರಶೇಖರ ಎಸ್., ಎಸ್ಬಿಐ ಅಧಿಕಾರಿಗಳ ಒಕ್ಕೂಟದ ರಮೇಶ ಶಿಂಧೆ, ಮಹಮ್ಮದ್ ಖದೀರ್, ರಾಜು ಕುಲಕರ್ಣಿ, ಎಂ.ಎಸ್. ಮಂಗಳೂರ, ಕೃಷ್ಣ, ಯಶವಂತ ನಾಯ್ಕ, ಸುರೇಶ ಬಾಬು ಕಡಿಯಾಳಕರ್, ಸುರೇಶ ಐ., ಸಿದ್ರಾಮ ಸೀತಾ, ಅಂಬರೀಷ ಪಾಲ್ಗೊಂಡಿದ್ದರು