ಬೀದರ್: ಜಿಲ್ಲಾ ಆಡಳಿತದ ವತಿಯಿಂದ ಇಲ್ಲಿಯ ಪೊಲೀಸ್ ಪರೇಡ್ ಮೈದಾನದಲ್ಲಿ ಮಂಗಳವಾರ ನಡೆದ ‘ಕಲ್ಯಾಣ ಕರ್ನಾಟಕ ಉತ್ಸವ’ದಲ್ಲಿ ಪಶು ಸಂಗೋಪನಾ ಸಚಿವ ಪ್ರಭು ಚವಾಣ್ ಅವರು ಕನ್ನಡ ಹಾಗೂ ಹಿಂದಿಯಲ್ಲಿ ಭಾಷಣ ಮಾಡಿದರು. ಭಾಷಣದಲ್ಲಿ ತಪ್ಪು ಅಂಶಗಳನ್ನು ಉಲ್ಲೇಖಿಸುವ ಮೂಲಕ ಪಕ್ಷದ ಮುಖಂಡರು ಮುಜುಗರಕ್ಕೆ ಒಳಗಾಗುವಂತೆ ಮಾಡಿದರು.
ಅಧಿಕಾರಿಗಳು ಕನ್ನಡದಲ್ಲಿ ಬರೆದುಕೊಟ್ಟ ನಾಲ್ಕು ಪುಟಗಳ ಭಾಷಣವನ್ನು ಓದಲು ಸಾಧ್ಯವಾಗದೆ ಹಿಂದಿಯಲ್ಲಿ ಮಾತನಾಡಿದರು.
‘ಹೈದರಾಬಾದ್ ಕರ್ನಾಟಕ ಹಾಗೂ ಮುಂಬೈ ಕರ್ನಾಟಕಕ್ಕೆ ಸ್ವಾತಂತ್ರ್ಯ ದೊರೆತಿರಲಿಲ್ಲ. ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಬೇಕು ಎಂದು ಸಂತರ, ಸ್ವಾಮಿಗಳ ಬೇಡಿಕೆ ಇತ್ತು’ ಎಂದು ತಪ್ಪಾಗಿ ಪ್ರಸ್ತಾಪಿಸಿದರು.
‘ಜಿಲ್ಲಾಧಿಕಾರಿ ಕಚೇರಿ, ತಾಲ್ಲೂಕು ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಸಾರ್ವಜನಿಕರಿಂದ ಅನೇಕ ದೂರುಗಳು ಬರುತ್ತಿವೆ. ಭ್ರಷ್ಟಾಚಾರ ನಿರ್ಮೂಲನೆಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ. 70 ವರ್ಷಗಳಿಂದ ನನೆಗುದಿ ಬಿದ್ದಿರುವ ಯೋಜನೆಗಳಿವೆ. ಹೊಸ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹೆಚ್ಚಿನ ನೆರವು ತರಲಾಗುವುದು’ ಎಂದು ಹೇಳಿದರು.