ಬೀದರ್: ಮುಂಗಾರು ಹಂಗಾಮಿನ ಪ್ರಯುಕ್ತ ಜಿಲ್ಲೆಯ 171 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ರಸಗೊಬ್ಬರ ದಾಸ್ತಾನು ಮಾಡಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ತಿಳಿಸಿದ್ದಾರೆ.
ತಲಾ 50 ಕೆ.ಜಿ.ಯ 2 ಲಕ್ಷ ಚೀಲ ಡಿಎಪಿ ಹಾಗೂ 78,260 ಚೀಲ ಇತರ ಗೊಬ್ಬರಗಳ ದಾಸ್ತಾನು ಮಾಡಲಾಗಿದ್ದು, ರೈತರು ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದ್ದಾರೆ.
ಬ್ಯಾಂಕ್ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಕ್ಕೆ ಭದ್ರತೆ ನೀಡಿ, ರೈತರಿಗೆ ಪಿಕೆಪಿಎಸ್ ಮೂಲಕ ಸ್ಥಳೀಯವಾಗಿ ರಸಗೊಬ್ಬರ ಲಭಿಸುವಂತೆ ನೋಡಿಕೊಳ್ಳುತ್ತಿದೆ. ರಾಜ್ಯದ 21 ಡಿಸಿಸಿ ಬ್ಯಾಂಕ್ಗಳಲ್ಲೇ ಮಾದರಿಯಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ಆಡಳಿತ ಮಂಡಳಿ ಸಭೆಯಲ್ಲಿ ರಸಗೊಬ್ಬರ ಸರಬರಾಜಿಗೆ ಬೀದರ್ ಡಿಸಿಸಿ ಬ್ಯಾಂಕ್ ಮಾದರಿ ಎಂದು ಘೋಷಿಸಲಾಗಿದ್ದು, ಉಳಿದ 20 ಡಿಸಿಸಿ ಬ್ಯಾಂಕ್ಗಳು ಇದರ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ನಿರ್ಧರಿಸಿವೆ ಎಂದು ಹೇಳಿದ್ದಾರೆ.
ಕೋವಿಡ್ 19 ಸೋಂಕಿನ ಪ್ರಯುಕ್ತ ರೈತರು ರಸಗೊಬ್ಬರ ಖರೀದಿಗೆ ಹೋದಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.