ಬೀದರ್: ನಗರದ ನೌಬಾದ್ ಸಮೀಪದ ಭಾಲ್ಕಿ ರಸ್ತೆಯಲ್ಲಿ ಬಿಜೆಪಿ ಜಿಲ್ಲಾ ಭವನದ ಶಿಲಾನ್ಯಾಸ ಕಾರ್ಯಕ್ರಮ ಶುಕ್ರವಾರ (ಆ. 14) ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ ತಿಳಿಸಿದರು.
ಬೀದರ್, ವಿಜಯಪುರ, ಬಾಗಲಕೋಟೆ, ಬಳ್ಳಾರಿ, ಕೊಪ್ಪಳ, ರಾಯಚೂರು, ಕೋಲಾರ, ತಿಪಟೂರು ಸೇರಿ ರಾಜ್ಯದ ಎಂಟು ಜಿಲ್ಲೆ ಹಾಗೂ ತಿಪಟೂರು ಮಂಡಲದಲ್ಲಿ ಒಂದೇ ದಿನ ಜಿಲ್ಲಾ ಭವನಗಳ ಶಿಲಾನ್ಯಾಸ ಜರುಗಲಿದೆ ಎಂದು ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
ಶಿಲಾನ್ಯಾಸದ ವರ್ಚುವಲ್ ಕಾರ್ಯಕ್ರಮ ದೆಹಲಿ ಹಾಗೂ ಬೆಂಗಳೂರಿನಿಂದ ಪ್ರಸಾರಗೊಳ್ಳಲಿದೆ. ಬೆಳಿಗ್ಗೆ 11.05ಕ್ಕೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನಕುಮಾರ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಕಾರ್ಯಕ್ರಮ ಉದ್ಘಾಟಿಸುವರು. ಬೆಳಿಗ್ಗೆ 11.10ಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ನಿವಾಸದಿಂದ ಭಾಷಣ ಮಾಡುವರು.
11.20ಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನವದೆಹಲಿಯಿಂದ ನಿವೇಶನಗಳ ಪ್ರದರ್ಶನ ಹಾಗೂ ಶಿಲಾಫಲಕ ಅನಾವರಣ ಮಾಡುವರು ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್, ಸಂಸದ ಭಗವಂತ ಖೂಬಾ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್ ಸುದ್ದಿಗೋಷ್ಠಿಯಲ್ಲಿ ಇದ್ದರು.