ಬೀದರ್: ‘ಸಿಎಎ, ಎನ್ಆರ್ಸಿ ಕಾಯ್ದೆ ಜಾರಿಗೆ ಬಂದಲ್ಲಿ ಭಾರತದ ಸಂವಿಧಾನ ಆಶಯಗಳಿಗೆ ಧಕ್ಕೆ ಉಂಟಾಗಲಿದೆ. ಈ ಕಾಯ್ದೆ ದೇಶದ ಅಲ್ಪಸಂಖ್ಯಾತರು, ದಲಿತರು, ಬುಡಕಟ್ಟು, ಅಲೆಮಾರಿ, ಆದಿವಾಸಿಗಳ ಬದುಕಿನಲ್ಲಿ ತಲ್ಲಣ ಉಂಟು ಮಾಡಿದೆ’ ಎಂದುಎಂದು ಅಖಿಲ ಭಾರತೀಯ ವಕೀಲರ ಸಂಘದ ಸತ್ಯ ಶೋಧನಾ ಸಮಿತಿ ಆತಂಕ ವ್ಯಕ್ತಪಡಿಸಿದೆ.
‘ಸಣ್ಣ ಘಟನೆಗೆ ದೊಡ್ಡ ಕೇಸ್ ಹಾಕುವ ಮೂಲಕ ಸರ್ಕಾರ ಜನರ ಚಳವಳಿ ಹತ್ತಿಕ್ಕುವ ಪ್ರಯತ್ನ ನಡೆದಿದೆ. ಮೈಸೂರಿನಲ್ಲಿ ‘ಫ್ರೀ ಕಾಶ್ಮೀರ’ ಫಲಕ ಹಿಡಿದಿದ್ದ ನಳಿನಿ ವಿರುದ್ಧ, ಕೊಪ್ಪಳದಲ್ಲಿ ಕವಿತೆ ಓದಿದ ಸಿರಾಜ್ ಬಿಸರಳ್ಳಿ ವಿರುದ್ಧ ಹಾಗೂ ಬೀದರ್ನಲ್ಲಿ ಮಕ್ಕಳಿಂದ ನಾಟಕ ವಾಡಿಸಿದ್ದಕ್ಕೆ ಮುಖ್ಯ ಶಿಕ್ಷಕಿ ಹಾಗೂ ಪೋಷಕಿಯ ವಿರುದ್ಧ ಪ್ರಕರಣ ದಾಖಲಿಸಿರುವುದು ಆಡಳಿತ ನಡೆಸುವವರ ಮನಸ್ಥಿತಿ ತೋರಿಸುತ್ತದೆ’ ಎಂದುಸಮಿತಿಯ ಶ್ರೀನಿವಾಸ ಕುಮಾರ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ಸಂಘದ ರಾಜ್ಯ ಸಮಿತಿ ಸದಸ್ಯರು ಶಾಹೀನ್ ಶಿಕ್ಷಣ ಸಂಸ್ಥೆಯ ಶಾಲೆಗೆ ಭೇಟಿ ನೀಡಿ, ಶಾಲಾ ಸಿಬ್ಬಂದಿಯಿಂದ ಮಾಹಿತಿ ಪಡೆದರು. ನಂತರ ಮುಖ್ಯಶಿಕ್ಷಕಿ ಹಾಗೂ ಪಾಲಕಿಯನ್ನು ಬೀದರ್ನ ಕಾರಾಗೃಹದಲ್ಲಿ ಭೇಟಿಯಾಗಿ ಅವರೊಂದಿಗೆ ಸಮಾಲೋಚಿಸಿದರು.
ರಾಜ್ಯ ಪರಿಷತ್ ಸದಸ್ಯರಾದ ಜಗನ್ನಾಥ, ಅನ್ನೀಸ್ ಪಾಶಾ, ಅನ್ಶದ್, ಚೇತನ್. ಬೀದರ್ನ ವಕೀಲ ಬಾಬುರಾವ್ ಹೊನ್ನಾ, ಸರ್ಫರಾಜ್, ತಲ್ಹಾ ಹಾಸ್ಮಿ, ಸಂಜಯ ಮಠಪತಿ, ಎಐಎಂಐಎಂ ಜಿಲ್ಲಾ ಘಟಕದ ಅಧ್ಯಕ್ಷ ಸಯ್ಯದ್ ಮನ್ನೂರ್ ಖಾದ್ರಿ ಹಾಗೂ ಜೆಡಿಎಸ್ನ ಮಹಮ್ಮದ್ ಅಸಾದೋದ್ದಿನ್ ಇದ್ದರು.
ಮುಂದುವರಿದ ತನಿಖೆ: ವಿವಾದಾತ್ಮಕ ನಾಟಕ ಪ್ರದರ್ಶಿಸಿದ ಘಟನೆಗೆ ಸಂಬಂಧಪಟ್ಟಂತೆ ಶನಿವಾರ ಪೊಲೀಸರು ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಮಾಡಿ ಮಾಹಿತಿ ಸಂಗ್ರಹಿಸಿದರು.
ಪೊಲೀಸರ ಇನ್ನೊಂದು ತಂಡ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಬಂಧನಕ್ಕೆ ಶೋಧಕಾರ್ಯ ಮುಂದುವರಿಸಿದೆ.