ಚಿಟಗುಪ್ಪ: ಇಲ್ಲಿಯ ಐತಿಹಾಸಿಕ ಬನಶಂಕರಿ ದೇವಿ ದೇಗುಲದ ಆವರಣದಲ್ಲಿ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ನೆರವೇರಿತು.
‘ಬನಶಂಕರಿ ಮಾತಾಕಿ ಜೈ’, ‘ಭವಾನಿ ಮಾತಾಕಿ ಜೈ’ ಎನ್ನುತ್ತ ಸಾವಿರಾರು ಭಕ್ತರು ಬಾಳೆಹಣ್ಣು, ಉತ್ತತ್ತಿ ಎಸೆದು ಜಯಘೋಷ ಕೂಗುತ್ತ ತೇರು ಎಳೆದರು. ದೇವಸ್ಥಾನದ ರಥಬೀದಿಯಲ್ಲಿ ಸಾವಿರಾರು ಭಕ್ತರು ರಥ ಎಳೆಯುವ ಹಗ್ಗಕ್ಕೆ ಕೈಜೋಡಿಸಿದರು.
ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು. ರಥೋತ್ಸವದಲ್ಲಿ ಪುರವಂತರ ಪುರವಂತಿಗೆ ಸೇವೆ, ಡೊಳ್ಳು ಕುಣಿತ, ಬಾಜಾ ಬಜಂತ್ರಿ ಎಲ್ಲರ ಆಕರ್ಷಣೆಯಾಗಿದ್ದವು.
ಮಹಿಳೆಯರು ಹಸಿರು ಬಳೆಗಳನ್ನು ಖರೀದಿಸಿ ದೇವರಿಗೆ ಅರ್ಪಿಸಿದರು. ಮಕ್ಕಳು ದೊಡ್ಡ ಆಕೃತಿಯ ಬಲೂನುಗಳು ಖರೀದಿಸಿ ಕೈಯಲ್ಲಿ ಹಿಡಿದುಕೊಂಡು ಹಾರಾಡಿಸುತ್ತ ಕುಣಿದು ಕುಪ್ಪಳಿಸಿದರು. ವೃದ್ಧರು ಬನಶಂಕರಿ ದೇವಿಯ ಭಾವಚಿತ್ರಗಳ ಫೋಟೊಗಳು ಖರೀದಿಸುವಲ್ಲಿ ನಿರತರಾಗಿದ್ದರು. ರಥೋತ್ಸವ ನಿಮಿತ್ತ ಪಟ್ಟಣದ ಭವಾನಿ ದೇಗುಲದಿಂದ ಗಾಂಧಿ ವೃತ್ತದ ವರೆಗಿನ ಮುಖ್ಯಬೀದಿಯಲ್ಲಿ ಜನ ಜಂಗುಳಿ ಕಂಡುಬಂತು.