ಬೀದರ್: ಕಳ್ಳಬಟ್ಟಿ ತಯಾರಿಕೆ, ಸಾಗಣೆ ಹಾಗೂ ಮಾರಾಟ ತಡೆಗೆ ಅಬಕಾರಿ, ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಸಂಪೂರ್ಣ ನಿಯಂತ್ರಣಕ್ಕೆ ತರಬೇಕು ಎಂದು ಜಿಲ್ಲಾ ಮಟ್ಟದ ಸ್ಥಾಯಿ ಸಮಿತಿಯಲ್ಲಿ ಸೂಚಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಥಾಯಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ರೂಢಿಗತ ಆರೋಪಿಗಳ ವಿರುದ್ಧ ಸಿ.ಆರ್.ಪಿ.ಸಿ ಕಾಯ್ದೆ ಮತ್ತು ಗೂಂಡಾ ಕಾಯ್ದೆ ಅಡಿಯಲ್ಲಿ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಬೇಕು. ಕಳ್ಳಬಟ್ಟಿ ಪೀಡಿತ ಪ್ರದೇಶಗಳಲ್ಲಿ ಶಿಕ್ಷಣ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಹಕಾರದೊಂದಿಗೆ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ನಿರ್ದೇಶನ ನೀಡಿದರು.
ಬೀದರ್ ಜಿಲ್ಲೆಗೆ ಎರಡು ರಾಜ್ಯಗಳ ಗಡಿಗಳಿವೆ. ಗಡಿ ಆಚೆಯಿಂದ ಯಾವುದೇ ರೀತಿಯ ಮದ್ಯ ಸರಬರಾಜು ಆಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಬಕಾರಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಗಡಿಯಲ್ಲಿ ಬೆಳೆಗಳ ಮಧ್ಯೆ ಅಫಿಮು, ಗಾಂಜಾ, ಬೆಳೆ ಸಾಗುವಳಿ ಮಾಡಿದ್ದರೆ ಪತ್ತೆ ಹಚ್ಚಿ ನಾಶ ಮಾಡಬೇಕು. ನಿಷೇಧಿತ ಔಷಧಿಗಳು ಮಾರಾಟವಾಗಂತೆ ಎಚ್ಚರವಹಿಸಬೇಕು ಎಂದು ಸಭೆಯಲ್ಲಿ ಸೂಚಿಸಲಾಯಿತು.
ಅಬಕಾರಿ ಇಲಾಖೆಯ ಉಪ ಆಯುಕ್ತ ಮಂಜುನಾಥ ಎನ್ , ‘ಕಳೆದ ಒಂದು ವರ್ಷದ ಅವಧಿಯಲ್ಲಿ ಗಡಿ ಪ್ರದೇಶದಲ್ಲಿ ವಿವಿಧೆಡೆ ದಾಳಿ ನಡೆಸಿ ಕಳ್ಳಬಟ್ಟಿ ತಯಾರಿಕೆಯನ್ನು ನಿಯಂತ್ರಿಸಲಾಗಿದೆ. ಕಬ್ಬಿನ ಹೊಲಗಳಲ್ಲಿ ಬೆಳೆಗಳ ಮಧ್ಯೆ ಬೆಳೆದಿದ್ದ ಗಾಂಜಾ ನಾಶ ಪಡಿಸಿ ಹೊಲಗಳ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ’ ಎಂದು ಸಭೆಗೆ ಮಾಹಿತಿ ನೀಡಿದರು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ, ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶಿವಶಂಕರ, ಪ್ರೊಬೆಷನರಿ ಐಎಎಸ್ ಅಧಿಕಾರಿ ಕೀರ್ತನಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿ.ಜಿ.ರೆಡ್ಡಿ, ಬೀದರ್ ಜಿಲ್ಲಾ ಕೆಮಿಕಲ್ ಹಾಗೂ ಔಷಧ ವಿತರಕರ ಸಂಘದ ಅಧ್ಯಕ್ಷ ಇದ್ದರು.