ಹುಮನಾಬಾದ್: ತಾಲ್ಲೂಕಿನ ಹಳ್ಳಿಖೇಡ(ಬಿ) ಪಟ್ಟಣದ ಪೊಲೀಸ್ ಠಾಣೆಯಲ್ಲಿ ಭಾನುವಾರ ದಲಿತರ ದಿನಾಚರಣೆ ನಡೆಯಿತು.
ಪೊಲೀಸ್ ಉಪನಿರೀಕ್ಷಕ ಮಹಾಂತೇಶ ಲುಂಬು ಮಾತನಾಡಿ, ‘ಹಳ್ಳಿಖೇಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳಲ್ಲಿರುವ ದಲಿತರಿಗೆ ತೊಂದರೆಯಾದರೆ ಹಾಗೂ ಜಾತಿ ನಿಂದನೆ ಮಾಡಿದರೆ ಭಯಪಡದೆ ದೂರು ನೀಡಬೇಕು. ಅಂಥವರ ಮೇಲೆ ಕಾನೂನು ಕ್ರಮಕೈಗೊಳ್ಳಲಾಗುವುದು’ ಎಂದರು. ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಗಟ್ಟಲು ಪ್ರತಿ ತಿಂಗಳು ಎರಡನೇ ಭಾನುವಾರ ದಲಿತರ ದಿನವನ್ನಾಗಿ ಆಚರಿಸಿ ದಲಿತರ ಕುಂದು ಕೊರತೆಗಳನ್ನು ಆಲಿಸಲಾಗುತ್ತಿದೆ ಎಂದರು.
ಸರ್ಕಾರದಿಂದ ದಲಿತರಿಗೆ ಸಿಗುವಂತಹ ವಿವಿಧ ಸೌಲಭ್ಯಗಳ ಕುರಿತು ವಿವರಿಸಿದ ಅವರು ದಲಿತ ದೌರ್ಜನ್ಯ ತಡೆ ಕಾಯ್ದೆ ಮತ್ತು ನಿಯಮಗಳ ಬಗ್ಗೆ ತಿಳಿಸಿದರು.
ಪುರಸಭೆ ಸದಸ್ಯ ಸುಶೀಲಕುಮಾರ ಮರಪಳ್ಳಿಕರ್, ಸಮಾಜ ಸುಧಾರಣಾ ಸಮಿತಿ ಅಧ್ಯಕ್ಷ ಕಾಶಿನಾಥ ಮರಪಳ್ಳಿಕರ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶರಣಪ್ಪ ಚಿಟ್ಟೆ, ಪ್ರಮುಖರಾದ ರಾಜು ಹುಡಗಿಕರ್, ದತ್ತು ಉಪ್ಪಾರ, ಶ್ರೀಕಾಂತ ಅರಳಿ, ಪವನ ಅರಳಿ ಹಾಗೂ ರಾಹುಲ ಪಂಡಿ ಇದ್ದರು.